ಕಾರವಾರ (ಉತ್ತರ ಕನ್ನಡ): ಇತ್ತೀಚೆಗೆ ಉತ್ತರಕನ್ನಡ ಜಿಲ್ಲೆಯ ಹಲವೆಡೆ ಚಿರತೆಗಳ ಓಡಾಟ ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಶಿರಸಿ ಮತ್ತು ದಾಂಡೇಲಿಯಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಚಿರತೆಗಳು ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದರಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಶಿರಸಿ ತಾಲೂಕಿನ ನಿರ್ನಳ್ಳಿಯಲ್ಲಿ ಭಾನುವಾರ ಮಧ್ಯರಾತ್ರಿ ನರಸಿಂಹ ಹೆಗಡೆ ಎಂಬುವರ ಮನೆಯ ಅಂಗಳಕ್ಕೆ ಚಿರತೆಯೊಂದು ಬಂದಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆಯು ಈ ಹಿಂದೆ ನಡೆದ ಚಿರತೆಗಳ ಓಡಾಟದ ಸರಣಿಗೆ ಮತ್ತೊಂದು ಸೇರ್ಪಡೆಯಾಗಿದೆ. ಈವರೆಗೆ ಗ್ರಾಮದಲ್ಲಿ ಚಿರತೆಗಳಿಂದ ಜಾನುವಾರುಗಳಿಗೆ ಹಾನಿಯಾದ ವರದಿಗಳಿದ್ದರೂ, ಮಾನವರ ಮೇಲೆ ದಾಳಿ ನಡೆದ ಬಗ್ಗೆ ವರದಿಯಾಗಿಲ್ಲ. ಆದರೂ, ಕಾಡಿನಲ್ಲಿ ಬೇಟೆಯಾಡುತ್ತಿದ್ದ ಚಿರತೆಗಳು ಇದೀಗ ಗ್ರಾಮಗಳಿಗೆ ಲಗ್ಗೆ ಹಾಕುತ್ತಿರುವುದು ಜನರ ನಿದ್ದೆಗೆಡಿಸಿದೆ. ಮಾನವರ ಮೇಲೆ ದಾಳಿ ನಡೆದರೂ ಆಶ್ಚರ್ಯವಿಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಬಸ್ ನಿಲ್ದಾಣದ ಕಟ್ಟೆ ಮೇಲೆ ಕುಳಿತ ಚಿರತೆ ವಿಡಿಯೋ ವೈರಲ್: ಇತ್ತ, ದಾಂಡೇಲಿಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಗಣೇಶಗುಡಿಯ ಅವೆಡಾ ಗ್ರಾಮದ ಬಸ್ ನಿಲ್ದಾಣದ ಕಟ್ಟೆ ಮೇಲೆ ಚಿರತೆಯೊಂದು ಆರಾಮವಾಗಿ ಕುಳಿತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಮಹಾಲಿಂಗ ಎಂಬುವರು ಅವೆಡಾ ಮಾರ್ಗದಲ್ಲಿ ಹೋಗುತ್ತಿದ್ದಾಗ ಚಿರತೆ ಕಾಣಿಸಿಕೊಂಡಿದೆ.
ಯಾವುದೇ ಭಯವಿಲ್ಲದೆ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಚಿರತೆಯ ದೃಶ್ಯವನ್ನು ಮಹಾಲಿಂಗ ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ “ಬಸ್ಗಾಗಿ ಕಾಯುತ್ತಿರುವ ಚಿರತೆ” ಎಂಬ ಹಾಸ್ಯಮಯ ಶೀರ್ಷಿಕೆಯೊಂದಿಗೆ ವೈರಲ್ ಆಗಿದ್ದು, ಕಾಡು ಪ್ರಾಣಿಗಳು ಮನುಷ್ಯರ ವಾಸಸ್ಥಳಗಳಿಗೆ ನಿರ್ಭಯವಾಗಿ ಬರುತ್ತಿರುವುದು ಇದೀಗ ಆತಂಕ ಹೆಚ್ಚಿಸಿದೆ. ಈ ಎರಡು ಘಟನೆಗಳು ಪ್ರದೇಶದಲ್ಲಿ ಮಾನವ-ವನ್ಯಜೀವಿ ಸಂಘರ್ಷದ ಸವಾಲನ್ನು ಮತ್ತಷ್ಟು ಹೆಚ್ಚಿಸಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.