ಬೆಳಗಾವಿ: ಚಾಕು, ಮಚ್ಚು, ಲಾಂಗು ಎಂದರೆ ಆಟಿಕೆ ಸಾಮಾನು ಆದಂತಾಗಿವೆ. ಪುಸ್ತಕ, ಪೆನ್, ಊಟದ ಡಬ್ಬಿ ಇಟ್ಟುಕೊಳ್ಳುವ ಬ್ಯಾಗ್ನಲ್ಲಿ ಮಾರಕಾಸ್ತ್ರಗಳನ್ನು ಇಟ್ಟು ಶಾಲಾ ಕಾಲೇಜು ಮಕ್ಕಳು ಓಡಾಡುತ್ತಿದ್ದಾರೆ. ಇದಕ್ಕೆಲ್ಲಾ ಬ್ರೇಕ್ ಹಾಕಲು ಬೆಳಗಾವಿ ಪೊಲೀಸ್ ಕಮಿಷನರ್ ನೂತನ ಚಕ್ರವ್ಯೂಹವೊಂದನ್ನು ರಚಿಸಿದ್ದಾರೆ. ಅದುವೇ “ಚುಚ್ಚು ನಿಯಂತ್ರಣ ತಂಡ”.
ಚಾಕು ಇರಿತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಕಮಿಷನರ್ ಭೂಷಣ ಗುಲಾಬರಾವ್ ಬೊರಸೆ ಅವರು ಚುಚ್ಚು ನಿಯಂತ್ರಣ ತಂಡವನ್ನು ಮೊನ್ನೆಯಷ್ಟೇ ಘೋಷಣೆ ಮಾಡಿದ್ದರು. ಈ ವಿಶೇಷ ತಂಡವು ನಿನ್ನೆ (ಗುರುವಾರ) ಫಿಲ್ಡಿಗಿಳಿಯಿತು. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸಂಶಯ ಬಂದವರನ್ನು ಹಿಡಿದು ತಲಾಶ್ ನಡೆಸಿದರು.
ಖಡಕ್ ಎಚ್ಚರಿಕೆ ನೀಡಿದ ಡಿಸಿಪಿ: ಡಿಸಿಪಿ ರೋಹನ್ ಜಗದೀಶ ನೇತೃತ್ವದಲ್ಲಿ ಮಾರ್ಕೆಟ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದರು. ಪೊಲೀಸರಿಗೆ ಶ್ವಾನ ದಳದ ಸಿಬ್ಬಂದಿ ಕೂಡ ಸಾಥ್ ನೀಡಿದರು. ಈ ವೇಳೆ, ಹಲವಾರು ಯುವಕರ ಬ್ಯಾಗ್, ಪಾಕೇಟ್ ಸೇರಿ ಸಂಪೂರ್ಣವಾಗಿ ತಪಾಸಣೆ ನಡೆಸಿದರು. ಏನಾದರು ಚಾಕು ಇಟ್ಟುಕೊಂಡಿದಿ ಏನಪ್ಪಾ..? ಅಂತಹದ್ದೇನಾದರೂ ಇಟ್ಟುಕೊಂಡರೆ ಹುಷಾರ್ ಅಂತಾ ಡಿಸಿಪಿ ಖಡಕ್ ಎಚ್ಚರಿಕೆ ನೀಡಿದರು.
ಮೊನ್ನೆಯಷ್ಟೇ ಬೆಳಗಾವಿಯಲ್ಲಿ ಇಬ್ಬರು ಅಪ್ರಾಪ್ತರು ಓರ್ವ ಕಾಲೇಜು ವಿದ್ಯಾರ್ಥಿಗೆ ಚಾಕು ಇರಿದು ಅಟ್ಟಹಾಸ ಮೆರೆದಿದ್ದರು. ವಿದ್ಯಾರ್ಥಿಗಳು ಚಾಕು ಇಟ್ಟುಕೊಂಡು ಓಡಾಡುತ್ತಿರುವ ವಿಚಾರ ಇಡೀ ಬೆಳಗಾವಿ ಜನತೆಯನ್ನು ಬೆಚ್ಚಿ ಬೀಳಿಸಿತ್ತು. ಅಲ್ಲದೇ ಸಣ್ಣ-ಪುಟ್ಟ ವಿಷಯಕ್ಕೆ ಚಾಕು ಇರಿದು ಹಲ್ಲೆ ಮಾಡುವುದು, ಜನರನ್ನು ಹೆದರಿಸುವುದು ಸಾಮಾನ್ಯ ಆಗಿ ಬಿಟ್ಟಿದೆ. ಇದು ಪೊಲೀಸರಿಗೆ ದೊಡ್ಡ ತಲೆ ನೋವಾಗಿತ್ತು. ಹಾಗಾಗಿ, ಪೊಲೀಸ್ ಕಮಿಷನರ್ ಭೂಷಣ ಬೊರಸೆ ಅವರು ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಅದುವೇ “ಚುಚ್ಚು ನಿಯಂತ್ರಣ ತಂಡ”. ಇದು ರಾಜ್ಯದಲ್ಲೇ ವಿನೂತನ ಪ್ರಯೋಗ ಆಗಿದ್ದು, ಶಾಂತಿ ಕದಡುವ ಕಿಡಿಗೇಡಿಗಳಿಗೆ ಎಚ್ಚರಿಕೆ ಗಂಟೆಯಾಗಿದೆ.