Breaking News

ಮುಂಬೈ ಬೀದಿಯಲ್ಲಿ ಪಾನಿಪೂರಿ ಮಾರುತ್ತಿದ್ದ ಹುಡುಗ ಇಂಗ್ಲೆಂಡ್’ನಲ್ಲಿ ಟೆಸ್ಟ್ ಶತಕ ಬಾರಿಸಿದ..!

Spread the love

ಮುಂಬೈ ಬೀದಿಯಲ್ಲಿ ಪಾನಿಪೂರಿ ಮಾರುತ್ತಿದ್ದ ಹುಡುಗ ಇಂಗ್ಲೆಂಡ್’ನಲ್ಲಿ ಟೆಸ್ಟ್ ಶತಕ ಬಾರಿಸಿದ..!

ಉತ್ತರ ಪ್ರದೇಶದ ಬದೋಹಿಯಲ್ಲೊಂದು ಪುಟ್ಟ ಅಂಗಡಿ. ಆ ಅಂಗಡಿ ಮಾಲೀಕನಿಗೊಬ್ಬ ಮಗ.. ಕ್ರಿಕೆಟ್ ಹುಚ್ಚು ಹಿಡಿಸಿಕೊಂಡಿದ್ದವನಿಗೆ ಯಾರೋ ಹೇಳಿದ್ದಂತೆ, “ನೀನು ಇಲ್ಲಿಯೇ ಇದ್ದರೆ ಕ್ರಿಕೆಟರ್ ಆಗಲು ಸಾಧ್ಯವಿಲ್ಲ, ಮುಂಬೈಗೆ ಹೋಗು” ಎಂದು. 10ನೇ ವಯಸ್ಸಿನಲ್ಲಿ ತಂದೆಯ ಜೊತೆ ಮುಂಬೈಗೆ ಬಂದಿಳಿದಿದ್ದ ಆ ಹುಡುಗ.

ಮುಂಬೈ ಎಂದರೆ ಅದೊಂದು ಮಹಾಸಾಗರ. ಆ ಸಾಗರದಲ್ಲಿ ಅಪ್ಪಳಿಸಿ ಬರುವ ಅಲೆಗಳ ಮುಂದೆ ಈಜಲು ನಿಂತವನ ಹೆಸರು ಯಶಸ್ವಿ ಭೂಪೇಂದ್ರ ಕುಮಾರ್ ಜೈಸ್ವಾಲ್.

ಮಗನನ್ನು ಮುಂಬೈಗೆ ಕರೆ ತಂದ ತಂದೆಗೆ ಇದ್ದ ಚಿಂತೆ ‘ಈ ಮಹಾನಗರದಲ್ಲಿ ಮಗ ಹೇಗೆ ಇರಬಲ್ಲ’ ಎಂದು.

‘’ನಾನು ಇಲ್ಲಿ ಅಂಕಲ್ ಜೊತೆ ಇರುತ್ತೇನೆ” ಅಂದಿದ್ದ ಜೈಸ್ವಾಲ್. ಆ ಅಂಕಲ್ ಏನೂ ಮುಂಬೈನಲ್ಲಿ ಕೋಟೆ ಕಟ್ಟಿಕೊಂಡವನಲ್ಲ. ಒಬ್ಬ ಬಡ ವ್ಯಾಪಾರಿ.

10 ವರ್ಷದ ಹುಡುಗನನ್ನು ಹಾಲಿನ ಡೈರಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಸುತ್ತಾನೆ. ಅಲ್ಲೇ ಪುಟ್ಟ ಕೋಣೆಯೊಂದರಲ್ಲಿ ವಾಸ. ಬೆಳಗ್ಗೆ 5 ಗಂಟೆಗೆ ಎದ್ದು ಅಂಗಡಿಯನ್ನು ಶುಚಿಗೊಳಿಸಿ ಕ್ರಿಕೆಟ್ ಅಭ್ಯಾಸಕ್ಕೆ ಹೊರಟು ಬಿಡುತ್ತಿದ್ದ ಯಶಸ್ವಿ ಜೈಸ್ವಾಲ್. ಅಭ್ಯಾಸ ಮುಗಿಸಿ ಬಂದವನು ರಾತ್ರಿಯವರೆಗೆ ಅಂಗಡಿಯಲ್ಲಿ ಕೆಲಸ ಮಾಡಬೇಕಿತ್ತು.

ಬೆಳಗ್ಗೆಯಿಂದ ಕ್ರಿಕೆಟ್ ಆಡಿ ದಣಿದು ಬರುತ್ತಿದ್ದ ಪುಟ್ಟ ಬಾಲಕ ಇದನ್ನೆಲ್ಲಾ ಹೇಗೆ ತಾನೇ ಸಹಿಸಿಕೊಳ್ಳಬಲ್ಲ..?
ಒಂದು ದಿನ ಡೈರಿಯ ಮಾಲೀಕ, ‘ಇವನು ಕೆಲಸಕ್ಕೆ ಬರುವವನಲ್ಲ’ ಎಂದು ಜೈಸ್ವಾಲ್’ನನ್ನು ಓಡಿಸಿ ಬಿಟ್ಟ.

ದೊಡ್ಡ ನಗರದಲ್ಲಿ ಸಣ್ಣ ಹುಡುಗ ಏಕಾಂಗಿಯಾಗಿ ನಿಂತಿದ್ದ. ಗುರುತು ಪರಿಚಯವಿಲ್ಲದ ಜನ. ಗೊತ್ತು ಗುರಿಯಿಲ್ಲದ ಬದುಕು.

ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡವನೇ ಮುಂಬೈನ ಆಜಾದ್ ಮೈದಾನಕ್ಕೆ ಬಂದ. ಅಲ್ಲಿ ಮುಸ್ಲಿಂ ಯುನೈಟೆಡ್ ಎಂಬ ಕ್ರಿಕೆಟ್ ಕ್ಲಬ್ ಇದೆ. ‘’ನಾನು ಕ್ರಿಕೆಟ್ ಆಡಬೇಕು, ದಯವಿಟ್ಟು ಸಹಾಯ ಮಾಡಿ’’ ಎಂದು ಯಶಸ್ವಿ ಅಂಗಲಾಚುತ್ತಾನೆ.

‘’ನಮ್ಮ ಕ್ಲಬ್ ಪರ ಒಂದು ಮ್ಯಾಚ್ ಆಡುವೆಯಂತೆ.
ಚೆನ್ನಾಗಿ ಆಡಿದರೆ ಇಲ್ಲೇ ವಾಸಕ್ಕೆ ವ್ಯವಸ್ಥೆ ಮಾಡುತ್ತೇವೆ’’ ಎಂಬ ಭರವಸೆ ಆ ಕ್ರಿಕೆಟ್ ಕ್ಲಬ್’ನಿಂದ ಸಿಕ್ಕಿತು.

ಒಂದೇ ಒಂದು ಅವಕಾಶಕ್ಕಾಗಿ ಕಾದಿದ್ದ ಹುಡುಗ, ಸಿಕ್ಕ ಅವಕಾಶದಲ್ಲಿ ಹಿಗ್ಗಾಮುಗ್ಗ ಬಾರಿಸಿ ಬಿಟ್ಟ.

ಯಶಸ್ವಿ ಜೈಸ್ವಾಲ್’ನ ಆಟ ನೋಡಿ ಮೆಚ್ಚಿದ ಮುಸ್ಲಿಂ ಯುನೈಟೆಡ್ ಕ್ಲಬ್’ನ ಕೋಚ್ ಇಮ್ರಾನ್, ಹುಡುಗನನ್ನು ಒಂದು ಟೆಂಟ್ ಬಳಿ ಕರೆ ತರುತ್ತಾರೆ. ‘ಇಲ್ಲೇಕೆ ಕರೆ ತಂದರು’ ಎಂದು ಯೋಚಿಸುತ್ತಿದ್ದ ಹುಡುಗನಿಗೆ ಆಮೇಲೆ ಗೊತ್ತಾಗಿದ್ದು, “ನನ್ನ ಮುಂದಿನ ವಾಸ ಇಲ್ಲೇ” ಎಂದು.

ಕಬ್ಬಿಣದ ತಗಡಿನಿಂದ ಮಾಡಿದ ಟೆಂಟ್. ಬಿಸಿಲ ಧಗೆ. ನಿದ್ದೆಯಾದರೂ ಹೇಗೆ ಬಂದೀತು..? ಹಾಗೆಂದು ಹುಡುಗನಿಗೆ ಬೇರೆ ದಾರಿಯಾದರೂ ಏನಿತ್ತು..? 3 ವರ್ಷ ಅಲ್ಲೇ ಮಲಗುತ್ತಾನೆ. ಕರೆಂಟ್ ಇಲ್ಲ, ಶೌಚಾಲಯವಿಲ್ಲ. 10-14ನೇ ವಯಸ್ಸಿನಲ್ಲಿ ಪಡಬಾರದ ಯಾತನೆ ಪಟ್ಟು ಬಿಟ್ಟ ಯಶಸ್ವಿ.

ಮಳೆಗಾಲ ಬಂತೆಂದರೆ ಟೆಂಟ್ ಒಳಗೆ ನೀರು ನುಗ್ಗುತ್ತಿತ್ತು. ಯಶಸ್ವಿ ಜೈಸ್ವಾಲ್ ಹೇಳಿಕೊಂಡಂತೆ ಟೆಂಟ್’ನಲ್ಲಿ ವಾಸಿಸುತ್ತಿದ್ದ ಕೆಲ ಹುಡುಗರು ಆತನಿಗೆ ಹೊಡೆಯುತ್ತಿದ್ದರಂತೆ. ‘’ನಮಗೆಲ್ಲಾ ಅಡುಗೆ ಮಾಡಿ ಹಾಕು’’ ಎಂದು ಹಿಂಸಿಸುತ್ತಿದ್ದರಂತೆ.

ಕ್ರಿಕೆಟ್ ಆಡಲು ಹೇಗೋ ಒಂದು ಕ್ಲಬ್ ಸಿಕ್ಕಿತ್ತು. ಜೀವನ ನಡೆಯಬೇಕು, ಕೈಯಲ್ಲಿ ದುಡ್ಡಿಲ್ಲ. ಹುಡುಗ ಏನು ಮಾಡಿದ ಗೊತ್ತೇ..? ಕ್ರಿಕೆಟ್ ಮುಗಿಸಿ ಸಂಜೆ 7 ಗಂಟೆಗೆ ಟೆಂಟ್’ಗೆ ಬಂದವನೇ ಪಕ್ಕದ ಬೀದಿಯಲ್ಲಿ ಪಾನಿಪೂರಿ ವ್ಯಾಪಾರಿಯೊಬ್ಬನ ಜೊತೆ ಪಾನಿಪೂರಿ ಮಾರಲು ಶುರು ಮಾಡುತ್ತಾನೆ. ತನ್ನ ಜೊತೆ ಆಡುತ್ತಿದ್ದ ಹುಡುಗರು ಪಾನಿಪೂರಿ ತಿನ್ನಲು ಬಂದರೆ ಎಲ್ಲಿ ಹಂಗಿಸುತ್ತಾರೋ ಎಂಬ ಆತಂಕದಲ್ಲಿ ತಲೆ ತಪ್ಪಿಸಿಕೊಳ್ಳುತ್ತಿದ್ದನಂತೆ ಜೈಸ್ವಾಲ್.

ಹೀಗೇ ಸಮಯ ಉರುಳುತ್ತಿತ್ತು.. ಕಾಲಚಕ್ರ ತಿರುಗುತ್ತಲೇ ಇತ್ತು. ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಕ್ರಿಕೆಟ್ ಕಲಿಯುತ್ತಿದ್ದ ಯಶಸ್ವಿ ಜೈಸ್ವಾಲ್. ಉತ್ತರ ಪ್ರದೇಶದಿಂದ ಉರುಳಿದ್ದ ಶಿಲೆಗೆ ಉಳಿ ಪೆಟ್ಟುಗಳು ಬೀಳುತ್ತಿದ್ದಂತೆ ಶಿಲೆ ಕಲೆಯಾಗಿ ಅರಳುತ್ತಿತ್ತು. ಕಷ್ಟಗಳು ಅವನನ್ನು ಮಾನಸಿಕವಾಗಿ ಗಟ್ಟಿಯಾಗಿಸಿದವು.

ಆಟಕ್ಕೆ ನಿಂತು ಬಿಟ್ಟನೆಂದರೆ ಯಶಸ್ವಿ ಜೈಸ್ವಾಲ್ ಬಾಲ ರಾಕ್ಷಸ.. ಓರಗೆಯ ಬೌಲರ್’ಗಳನ್ನು ಹುರಿದು ಮುಕ್ಕಿ ಬಿಡುತ್ತಿದ್ದ. ಅವನ ಆಟವನ್ನು ನೋಡಿದ ಕೆಲ ಹುಡುಗರು ಬೇರೆ ಬೇರೆ ಮ್ಯಾಚ್’ಗಳಿಗೆ ಕರೆದೊಯ್ಯುತ್ತಾರೆ. ಕ್ರಿಕೆಟ್ ಆಡಲು ದಿನಕ್ಕೆ 100 ರೂಪಾಯಿ ಸಂಬಳ. ಬೇರೆಯವರ ಬಳಿ ಬ್ಯಾಟ್’ಗಳನ್ನು ಕಾಡಿ ಬೇಡಿ ಆಡಬೇಕಿತ್ತು. ಜೀವನ ಕಷ್ಟವಾಗಿ ಬಿಟ್ಟಿತ್ತು. ಕ್ರಿಕೆಟ್ ಆಸೆ ಬಿಟ್ಟು ಮರಳಿ ಉತ್ತರ ಪ್ರದೇಶಕ್ಕೆ ಹೋಗೋಣ ಎಂದು ನಿರ್ಧಾರ ಮಾಡಿ ಬಿಡುತ್ತಾನೆ ಯಶಸ್ವಿ ಜೈಸ್ವಾಲ್.

ಕೆಲವೊಮ್ಮೆ ದೇವರೇ ಮನುಷ್ಯ ರೂಪದಲ್ಲಿ ಬಂದು ಬಿಡುತ್ತಾನೆ. ಸೋತು ಕೈಚೆಲ್ಲಿ ಕೂತಿದ್ದ ಯಶಸ್ವಿ ಜೈಸ್ವಾಲ್ ಪಾಲಿಗೆ ಆ ದಿನ ದೇವರಾಗಿ ಬಂದವರು
ಜ್ವಾಲಾ ಸಿಂಗ್. ಮುಂಬೈನ ಫೇಮಸ್ ಕ್ರಿಕೆಟ್ ಕೋಚ್.

2013, ಡಿಸೆಂಬರ್ ತಿಂಗಳು. ಒಳ್ಳೆಯ ಆಟಗಾರರಿಗಾಗಿ ಹುಡುಕುತ್ತಿದ್ದ ಜ್ವಾಲಾ ಸಿಂಗ್ ಕಣ್ಣಿಗೆ ಬಿದ್ದವನು ಯಶಸ್ವಿ ಜೈಸ್ವಾಲ್. ‘ಎ’ ಡಿವಿಜನ್ ಬೌಲರ್”ಗಳ ವಿರುದ್ಧ ಬೀಡು ಬೀಸಾಗಿ ಬ್ಯಾಟ್ ಬೀಸುತ್ತಿದ್ದ ಹುಡುಗನ್ನು ನೋಡಿ ಜ್ವಾಲಾ ಸಿಂಗ್ ಬೆಕ್ಕಸ ಬೆರಗಾಗಿ ಬಿಡುತ್ತಾರೆ. ಅಷ್ಟೇ.. ಅವತ್ತೇ ನಿರ್ಧಾರ ಮಾಡಿ ಬಿಡುತ್ತಾರೆ “ನನ್ನ ಪಾಲಿನ ಅರ್ಜುನ ಇವನೇ” ಎಂದು.

ಹುಡುಗನನ್ನು ಹತ್ತಿರಕ್ಕೆ ಕರೆದ ಜ್ವಾಲಾ ಸಿಂಗ್ “ಎಲ್ಲಿ ನಿನ್ನ ಮನೆ” ಎಂದು ಕೇಳುತ್ತಾರೆ. ‘’ಪಕ್ಕದಲ್ಲೇ ಒಂದು ಟೆಂಟ್’ನಲ್ಲಿದ್ದೇನೆ ಸರ್” ಎನ್ನುತ್ತಾನೆ ಯಶಸ್ವಿ.

ಇಂಥದ್ದೇ ಹಿನ್ನೆಲೆಯಿಂದ ಬಂದವರು ಜ್ವಾಲಾ ಸಿಂಗ್. ಹುಡುಗನಿಗೆ ಹೇಳಿದ ಮಾತು, “ನಿನ್ನ ಕ್ರಿಕೆಟ್ ಆಸಕ್ತಿ ಹೇಗಿದೆ ಎಂದು ನಾನು ಪರೀಕ್ಷೆ ಮಾಡಬೇಕು. ನನ್ನ ಬಳಿ ಪ್ರಾಕ್ಟೀಸ್’ಗೆ ಬಾ” ಎಂದು.

ಅಲ್ಲಿಂದ ಶುರುವಾಗಿತ್ತು ಯಶಸ್ವಿ ಜೈಸ್ವಾಲ್”ನ ಜೀವನದ ಮತ್ತೊಂದು ಅಧ್ಯಾಯ. ಮುಂಬೈ ಕ್ರಿಕೆಟ್ ಸಂಸ್ಥೆಯ ಡಿವಿಜನ್ ಮ್ಯಾಚ್’ಗಳಲ್ಲಿ ಶತಕಗಳ ಮೇಲೆ ಶತಕಗಳನ್ನು ಬಾರಿಸಿದ ಜೈಸ್ವಾಲ್, 16ನೇ ವಯಸ್ಸಿನಲ್ಲಿ ಇಂಡಿಯಾ ಅಂಡರ್-19 ತಂಡಕ್ಕೆ ಆಯ್ಕೆಯಾಗುತ್ತಾನೆ. 2020ರಲ್ಲಿ ಅಂಡರ್-19 ವಿಶ್ವಕಪ್’ನಲ್ಲೂ ಆಡುತ್ತಾನೆ. ಟೂರ್ನಿಯಲ್ಲೇ ಅತೀ ಹೆಚ್ಚು 400 ರನ್ ಗಳಿಸಿದವನ ಮುಂದಿನ ಪ್ರಯಾಣ ಮುಂಬೈ ಸೀನಿಯರ್ ಕ್ರಿಕೆಟ್ ತಂಡದ ಜೊತೆ.

2019ರಲ್ಲಿ ಬೆಂಗಳೂರಿನ ಆಲೂರು ಕ್ರಿಕೆಟ್ ಮೈದಾನದಲ್ಲಿ ವಿಜಯ್ ಹಜಾರೆ ಟೂರ್ನಿಯಲ್ಲಿ ದ್ವಿಶತಕ ಬಾರಿಸಿದ್ದಾಗ, ಈಗಿನ ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ “Next Superstar” ಎಂದು ಟ್ವೀಟ್ ಮಾಡಿದ್ದರು.

ರೋಹಿತ್ ಮಾತು ನಿಜವಾಗಿತ್ತು. ಮುಂಬೈನ ಟೆಂಟ್’ನಲ್ಲಿ ಮಲಗುತ್ತಿದ್ದ ಹುಡುಗ, ಆಜಾದ್ ಮೈದಾನದಲ್ಲಿ ಪಾನಿಪೂರಿ ಮಾರುತ್ತಿದ್ದ ಹುಡುಗ, ಆಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸುತ್ತಾನೆ. ಅಲ್ಲಿಂದ ಆರೇ ತಿಂಗಳಲ್ಲಿ ಟೆಸ್ಟ್ ದ್ವಿಶತಕ. ಆಸ್ಟ್ರೇಲಿಯಾದಲ್ಲಿ ಆಡಿದ ಪ್ರಪ್ರಥಮ ಟೆಸ್ಟ್’ನಲ್ಲೇ ಶತಕ.., ಈಗ ಇಂಗ್ಲೆಂಡ್’ನಲ್ಲಿ ಆಡಿದ ಮೊದಲ ಟೆಸ್ಟ್’ನಲ್ಲೂ ಶತಕ..

ಇವತ್ತಿಗೆ 23 ವರ್ಷದ ಯಶಸ್ವಿ ಜೈಸ್ವಾಲ್”ನ ಹೆಸರಲ್ಲಿರುವ ದಾಖಲೆಗಳ ಬಗ್ಗೆ ಗೊತ್ತಾ..?

* ಅಂಡರ್-19 ವಿಶ್ವಕಪ್’ನಲ್ಲಿ ಶತಕ
* ರಣಜಿ ಟ್ರೋಫಿಯಲ್ಲಿ ಶತಕ
* ಇರಾನಿ ಕಪ್”ನಲ್ಲಿ ಶತಕ
* ದುಲೀಪ್ ಟ್ರೋಫಿಯಲ್ಲಿ ಶತಕ
* ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕ
* ಭಾರತ ‘ಎ’ ತಂಡದ ಪರ ಶತಕ
* ಐಪಿಎಲ್’ನಲ್ಲಿ ಶತಕ
* ಅಂತರಾಷ್ಟ್ರೀಯ ಟಿ20ಯಲ್ಲಿ ಶತಕ
* ಟೆಸ್ಟ್ ಪದಾರ್ಪಣೆಯಲ್ಲಿ ಶತಕ
* ಪ್ರಥಮದರ್ಜೆ ಕ್ರಿಕೆಟ್’ನಲ್ಲಿ ದ್ವಿಶತಕ
* ಲಿಸ್ಟ್ ‘ಎ’ ಕ್ರಿಕೆಟ್’ನಲ್ಲಿ ದ್ವಿಶತಕ
* ಟೆಸ್ಟ್ ಕ್ರಿಕೆಟ್’ನಲ್ಲಿ ದ್ವಿಶತಕ
* ವೆಸ್ಟ್ ಇಂಡೀಸ್’ನಲ್ಲಿ ಟೆಸ್ಟ್ ಶತಕ
* ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಶತಕ
* ಇಂಗ್ಲೆಂಡ್’ನಲ್ಲಿ ಟೆಸ್ಟ್ ಶತಕ

ಮುಂಬೈನ ಆಜಾದ್ ಮೈದಾನದ ಬಳಿ 10-12 ವರ್ಷಗಳ ಹಿಂದೆ ಪಾನಿಪೂರಿ ಮಾರುತ್ತಿದ್ದ ಹುಡುಗ ತುಂಬಾ ದೂರ ಸಾಗಿ ಬಂದಿದ್ದಾನೆ.

“ಯಶಸ್ವೀಭವ, ವಿಜಯೀಭವ” ಯಶಸ್ವಿ ಜೈಸ್ವಾಲ್..!

-ಸುದರ್ಶನ್


Spread the love

About Laxminews 24x7

Check Also

ಎಸ್‌‍ಎಸ್‌‍ಎಲ್‌ಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

Spread the loveಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಪ್ರಮುಖ ಘಟ್ಟವಾದ ಎಸ್‌‍ಎಸ್‌‍ಎಲ್‌ಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ