ಬೆಂಗಳೂರು: ಕಾಲ್ತುಳಿತ ದುರಂತ ಸಂಬಂಧ ಸಿಎಂ, ಡಿಸಿಎಂ ರಾಜೀನಾಮೆಗೆ ಆಗ್ರಹಿಸಿ ಜೂನ್ 17ರಂದು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲು ರಾಜ್ಯ ಬಿಜೆಪಿ ತೀರ್ಮಾನಿಸಿದೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಗೋಪಾಲಯ್ಯ, “ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ಹೋರಾಟ ನಡೆಸಲಿದೆ. ಸಿಎಂ, ಡಿಸಿಎಂ, ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಮತ್ತು ಸಿಎಂ ನಿವಾಸ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಧಾನಸೌಧದಲ್ಲಿ ನಡೆದಿದ್ದು ಸನ್ಮಾನ ಕಾರ್ಯಕ್ರಮ ಅಲ್ಲ, ಅವಮಾನ ಮಾಡುವ ಕಾರ್ಯಕ್ರಮ” ಎಂದು ದೂರಿದರು.
“ಚಿನ್ನಸ್ವಾಮಿ ಮೈದಾನದಲ್ಲಿ ಗೇಟ್ ಓಪನ್ ಮಾಡಿದ್ದು ಕೇವಲ ನಾಲ್ಕು, 21 ಗೇಟ್ ಇದ್ರೂ ತೆರೆದಿರಲಿಲ್ಲ. ವಿಧಾನಸೌಧದ ಮುಂದೆಯೂ ಸಹ ಹಾಗೇ ಜನ ಜಮಾವಣೆಯಾಗಿತ್ತು. ಜನರು ಮರ ಏರಿ ಕುಳಿತಿದ್ರು. ಬೌರಿಂಗ್ ಆಸ್ಪತ್ರೆಯಲ್ಲಿ ಮೊದಲ ಸಾವಾಗಿತ್ತು. ಆ ಮಾಹಿತಿ ಸಿಎಂಗೆ ಲೇಟಾಗಿ ಬಂದಿತ್ತು. ಒಟ್ಟು 11 ಸಾವಾಗಿದೆ. ಸತ್ತ ಅನೇಕ ಕುಟುಂಬ ಸುಸ್ಥಿರ ಕುಟುಂಬ. ಅವರಿಗೆ ಪರಿಹಾರದ ಹಣ ಬೇಕಿರಲಿಲ್ಲ. ಅವರಿಗೆ ಬೇಕಾಗಿದ್ದು ತಮ್ಮ ಮಕ್ಕಳು” ಎಂದು ವಾಗ್ದಾಳಿ ನಡೆಸಿದರು.
“ಅವರ ಶಾಪ ಈ ಸರ್ಕಾರಕ್ಕೆ ತಟ್ಟುತ್ತದೆ. ಈ ಕಾರ್ಯಕ್ರಮ ಮಾಡಬೇಡಿ ಎಂದು ಡಿಸಿಪಿ ಅವರು ಡಿಪಿಎಆರ್ಗೆ ಪತ್ರ ಬರೆದಿದ್ದರು. ಆದರೂ ಏಕಾಏಕಿ ಪೊಲೀಸ್ ಮೇಲೆ ಕ್ರಮ ಮಾಡಿದ್ದು ನಿಮ್ಮ ತಪ್ಪು ಮುಚ್ಚಿಕೊಳ್ಳಲು. ಸಿದ್ದರಾಮಯ್ಯ ನೀವು ರಾಜ್ಯದ ಮುಖ್ಯಮಂತ್ರಿಯೋ? ಅಥವಾ ವಿಧಾನಸೌಧಕ್ಕೆ ಮಾತ್ರ ಮುಖ್ಯಮಂತ್ರಿಯೋ? ನೀವು ರಾಜೀನಾಮೆ ನೀಡಬೇಕು” ಎಂದು ಒತ್ತಾಯಿಸಿದರು.
Laxmi News 24×7