ಬೆಂಗಳೂರು: ಸರ್ಕಾರಕ್ಕೆ ಕಾಲ್ತುಳಿತ ಘಟನೆಯಿಂದ ಕೆಟ್ಟ ಹೆಸರು ಬಂದಿದೆ. ಯಾರು ಮುಂದೆ ಮಾಡೋಕೆ ಹೋದರೋ ಗೊತ್ತಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.
ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಘಟನೆಯಲ್ಲಿ ಲೋಪಗಳು ಹೇಗಾಯ್ತು ಎಂಬುದು ತನಿಖೆಯಿಂದ ಹೊರ ಬರಬೇಕು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆ ಆಗ್ತಿದೆ. ಕಾಲ್ತುಳಿತ ಪ್ರಕರಣ ಉದ್ದೇಶಪೂರ್ವಕವಲ್ಲ. ಸಿಐಡಿ ತನಿಖೆಯೂ ನಡೆಯುತ್ತಿದೆ. ಘಟನೆಯ ಬಗ್ಗೆ ವಿಸ್ತಾರವಾದ ವರದಿ ಕೊಡಬೇಕಲ್ಲ. ಹಿಂದಿನ ರಾತ್ರಿಯಿಂದ ಬೆಳಗ್ಗೆಯವರೆಗಿನ ತನಿಖಾ ವರದಿ ಕೊಡಬೇಕಲ್ಲ. ಬಿಜೆಪಿಯವರು ಒಂದು ಹೇಳ್ತಾರೆ, ರಾಜ್ಯದ ಜನರು ಒಂದು ರೀತಿ ಹೇಳ್ತಾರೆ. ವರದಿ ಬಂದ ಮೇಲೆ ತಾನೇ ಗೊತ್ತಾಗೋದು ಎಂದರು.
ಘಟನೆ ಬಗ್ಗೆ ಸಿಎಂ ಅವರಿಗೆ ಹೇಳೋರು ಯಾರು?. ಪೊಲೀಸರು ಅವರಿಗೆ ಹೇಳಬೇಕಲ್ವಾ?. ಸಿಎಂ ಅವರಿಗೆ ಗೊತ್ತಾಗಿದ್ದು ಅಂದು ಸಂಜೆ 5.30ಕ್ಕೆ. ಮೊದಲೇ ಗೊತ್ತಾಗಿದ್ರೆ ಕ್ರಮ ಕೈಗೊಳ್ತಿದ್ರು. ಮುಂಚೆಯೇ ಗೊತ್ತಾಗಿದ್ರೆ ಸಿಎಂ ಕಾರ್ಯಕ್ರಮಕ್ಕೆ ಹೋಗ್ತಿರಲಿಲ್ಲ. ನಗರ ಪೊಲೀಸ್ ಕಮಿಷನರ್ಗೆ ಹೇಗೆ ಗೊತ್ತಾಗುತ್ತದೆ?. ಕೆಳಗಿನನವರು ಅವರಿಗೆ ಹೇಳಿದ್ರೆ ತಾನೇ ಗೊತ್ತಾಗೋದು. ಬೆಳಗ್ಗೆ 10ಕ್ಕೆ ಡಿಪಿಆರ್ನಿಂದ ಆದೇಶವಾಗುತ್ತೆ. ಆನಂತರ ಪೊಲೀಸ್ ಇಲಾಖೆ ತಿಳಿಸಬೇಕಿತ್ತು. ಗೃಹ ಸಚಿವರಿಗೆ ಪೊಲೀಸರು ಹೇಳಬೇಕಿತ್ತು ಎಂದು ಸಚಿವ ಜಾರಕಿಹೊಳಿ ತಿಳಿಸಿದರು.
ಸರ್ಕಾರದ ಲೋಪಗಳು ಏನು ಅಂತ ಬರಬೇಕಲ್ಲ. ದಯಾನಂದ ಅವರು ಉತ್ತಮ ಅಧಿಕಾರಿ. ಅವರು ಕೆಲಸ ಮಾಡಿದ ಕಡೆ ಒಳ್ಳೆಯ ಹೆಸರಿದೆ. ಒಳ್ಳೆಯ ಅಧಿಕಾರಿ ಅಂತಾನೆ ಸಿಎಂ ಅವರನ್ನು ನಗರ ಪೊಲೀಸ್ ಆಯುಕ್ತರನ್ನಾಗಿ ಮಾಡಿದ್ದು. ಎರಡು ವರ್ಷ ಅವರಿಗೆ ಅವಕಾಶ ಕೊಟ್ರು. ದಯಾನಂದ್ ಒಳ್ಳೆಯ ಅಧಿಕಾರಿ ಎಂದು ಬೆಂಬಲ ವ್ಯಕ್ತಪಡಿಸಿದರು.
ಪ್ರಕರಣದಿಂದ ಪಕ್ಷದಲ್ಲಿ ಏನೂ ಬೆಳವಣಿಗೆ ಆಗಲ್ಲ. ಯಾರು ಕ್ರೆಡಿಟ್ ತೆಗೆದುಕೊಳ್ಳೋಕೆ ಹೋದ್ರು?. ಡಿಕೆಶಿ ಹೆಚ್ಎಎಲ್ಗೆ ಯಾಕೆ ಹೋದ್ರು ಗೊತ್ತಿಲ್ಲ. ಬೆಂಗಳೂರು ಉಸ್ತುವಾರಿಯಾಗಿ ಹೋಗಿದ್ದಾರೆ. ಸಿಎಂ ಕ್ರಿಕೆಟ್ ನೋಡೋರು ಅಷ್ಟೇ. ಅವರು ಆಡೋರು ಅಲ್ಲ. ಡಿಸಿಎಂ ಆಡಬಹುದು. ವರದಿ ಬಂದ ನಂತರ ಕ್ರಮ ಆಗುತ್ತದೆ. ಏನಾಗಿದೆ ಎಂಬುದು ಗೊತ್ತಾಗುತ್ತದೆ. ವರದಿಯನ್ನು ಕೋರ್ಟಿಗೆ ಕೊಡಬೇಕಾಗುತ್ತದೆ. ಏನೇನಾಗಿದೆ ಎಂದು ಅವರಿಗೆ ಹೇಳಬೇಕಾಗುತ್ತದೆ ಎಂದು ತಿಳಿಸಿದರು.
ಆರ್ಸಿಬಿ ಫ್ರಾಂಚೈಸಿ ಖರೀದಿಗೆ ಡಿಕೆಶಿ ಒಲವೆಂಬ ವಿಚಾರವಾಗಿ ಮಾತನಾಡಿ, ಆರ್ಸಿಬಿ ಡ್ರೆಸ್ ನೋಡಿದ್ರೆ ಓಡುವಂತಾಗಿದೆ ನಮಗೆ. ರೆಡ್ ಡ್ರೆಸ್ ಕಂಡ್ರೆ ಓಡಬೇಕಿನಿಸುತ್ತದೆ ಎಂದರು.
Laxmi News 24×7