ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ದೂಡಾ) ನೂತನ ಬಡಾವಣೆ ನಿರ್ಮಿಸಲು ಕೊನೆಗೂ ಜಮೀನು ಸಿಕ್ಕಂತೆ ಆಗಿದೆ. ಪ್ರಾಧಿಕಾರದ ಅಧಿಕಾರಿಗಳಿಗೆ ಲೇಔಟ್ ಮಾಡಲು ಜಮೀನಿನ ಚಿಂತೆ ದೂರ ಆಗಿದೆ. ಈಗಾಗಲೇ ಎರಡು ಕಡೆ ಭೂಮಿ ಆಯ್ಕೆ ಮಾಡಲಾಗಿದೆ ಎಂದು ಸ್ವತಃ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಭೆ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಮಧ್ಯಮ ವರ್ಗದವರಿಗೆ ಅಪಾರ್ಟ್ಮೆಂಟ್ ಮಾಡಿ ಕೊಡಲಾಗುವುದು ಎಂದು ಸುಳಿವು ನೀಡಿದ್ದಾರೆ.
ಅರ್ಜಿ ಹಾಕಿ ಹಲವು ದಿನಗಳೇ ಉರುಳಿದರೂ ಸರ್ಕಾರದಿಂದ ನಿವೇಶನ ಭಾಗ್ಯ ಕಲ್ಪಿಸಲಾಗುತ್ತಿಲ್ಲ ಎಂಬ ಕೂಗು ದಾವಣಗೆರೆ ಜನರಿಂದ ಕೇಳಿ ಬರುತ್ತಿತ್ತು. ಈಗಾಗಲೇ ದಾವಣಗೆರೆ - ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನಕ್ಕೆ ಅರ್ಜಿ ಹಾಕಿ ಕಾದು ಕೂತಿದ್ದರು. ಲೇಔಟ್ ಮಾಡಲು ದಾವಣಗೆರೆ ನಗರದ ಆವರಗೆರೆ, ವಡ್ಡನಹಳ್ಳಿ ಬಳಿ ಭೂಮಿ ನೋಡಿಯಾಗಿದೆ.
ಈ ಹಿಂದೆ ದಾವಣಗೆರೆ ನಗರ, ಬೂದಾಳ್ ರಸ್ತೆ, ಹರಿಹರ, ಅಮರಾವತಿ ಸೇರಿದಂತೆ ಹಲವೆಡೆ ಜಮೀನುಗಳನ್ನು ವೀಕ್ಷಣೆ ಮಾಡಿದ್ದರು. ಆದರೆ ಲೇಔಟ್ ಮಾಡಲು ಜಮೀನು ಸಿಕ್ಕಿದ್ದಿಲ್ಲ. ಇದೀಗ ಎರಡು ಲೇಔಟ್ ಮಾಡಲು ಜಮೀನು ಗುರುತಿಸಿದ್ದು, ಕೆಲವೇ ದಿನಗಳಲ್ಲಿ ನಿವೇಶನ ಮಾಡಲಿದೆ. ಅಲ್ಲದೆ ಜೆ ಹೆಚ್ ಪಟೇಲ್ ನಗರದಲ್ಲಿ ಐವತ್ತು- ನೂರು ಫ್ಲಾಟ್ಗಳನ್ನು ಕಟ್ಟಿ ಬಡವರಿಗೆ ಕೊಡಲು ನಿರ್ಧರಿಸಲಾಗಿದೆ ಎಂದು ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿವೇಶನಕ್ಕಾಗಿ 20 ಸಾವಿರ ಅರ್ಜಿ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಲೇಔಟ್ ಮಾಡದೇ ವರ್ಷಗಳೇ ಉರುಳಿವೆ. ನಿವೇಶನಗಳು ಕಡಿಮೆ ಬೆಲೆಗೆ ಸಿಗುತ್ತವೆ ಎಂದು 20 ಸಾವಿರ ಜನ ಅರ್ಜಿ ಹಾಕಿದ್ದರು. ಪ್ರಾಧಿಕಾರಕ್ಕೆ ಲೇಔಟ್ ಮಾಡಲು ಜಮೀನಿನ ಸಮಸ್ಯೆ ಎದುರಾಗಿತ್ತು. ಲೇಔಟ್ ಮಾಡಲು ರೈತರು ಜಮೀನು ಕೊಡಲು ಹಿಂದೇಟು ಹಾಕುತ್ತಿದ್ದರು. ಇನ್ನು ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಜಮೀನು ಕೊಡಲು ಇಷ್ಟಪಡದೆ ಇರುವ ಕಾರಣ 50:50 ಅನುಪಾತದಲ್ಲಿ ಜಮೀನು ನೀಡಿ ಎಂದು ಮನವಿ ಮಾಡಿದ್ದರು. ಅದರೇ ಇದೀಗ ಆವರಗೆರೆ ಹಾಗೂ ವಡ್ನಾಳ್ಳಿ ಬಳಿ ಜಮೀನು ನೋಡಿ ಫೈನಲ್ ಮಾಡಲಾಗಿದೆ.
Laxmi News 24×7