ಹುಬ್ಬಳ್ಳಿ: “ಬೆಂಗಳೂರು ಕಾಲ್ತುಳಿತ ಪ್ರಕರಣ ದುರಾದುಷ್ಟಕರ. ನನ್ನ ರಾಜಕೀಯ ಜೀವನದಲ್ಲಿ ಇಂತಹದೊಂದು ದುರ್ಘಟನಡೆ ನಡೆದಿಲ್ಲ. ಸರ್ಕಾರ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಮೇಲೆ ತೆಗೆದುಕೊಂಡ ಕ್ರಮ ಸ್ವಾಗತಾರ್ಹ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, “ನನ್ನ ವಿಧಾನ ಪರಿಷತ್ನ ರಾಜಕೀಯ ಜೀವನದಲ್ಲಿ 45 ವರ್ಷಗಳ ಅನುಭವದಲ್ಲಿ ಪೊಲೀಸ್ ಕಮಿಷನರ್ ಸೇರಿದಂತೆ ದೊಡ್ಡ ದೊಡ್ಡ ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಇದೇ ಮೊದಲು. ಈ ಘಟನೆ ಹೇಗೆ ಆಯಿತು ಎನ್ನುವುದಕ್ಕೆ ತಾಳ ಮೇಳ ಇಲ್ಲ. ಕಾರ್ಯಕ್ರಮಕ್ಕೆ ಒಂದು ದಿನಾಂಕ ನಿಗದಿಮಾಡಿ ಮಾಡಬಹುದಿತ್ತು. ಏಕಾಏಕಿ ರಾತೋರಾತ್ರಿ ಘೋಷಣೆ ಮಾಡಿದ್ದರಿಂದ ಲಕ್ಷಾಂತರ ಜನ ಸೇರಿದ್ದಾರೆ. ಪೊಲೀಸರ ಅನುಮತಿ ಇಲ್ಲ. ಸರ್ಕಾರ ಏನು ಮಾಡಿದೆ ಅದನ್ನು ನಾನು ಪರಿಶೀಲನೆ ಮಾಡುತ್ತೇನೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಸರ್ಕಾರವು ಈಕಡೆ ಲಕ್ಷ್ಯ ವಹಿಸಬೇಕಿತ್ತು. ಗೃಹ ಇಲಾಖೆ ಮುಂಜಾಗ್ರತ ಕ್ರಮ ತೆಗೆದುಕೊಳ್ಳಬೇಕಿತ್ತು. ಇದರಿಂದ ದೇಶದಲ್ಲಿ ಬೆಂಗಳೂರು ಬಗ್ಗೆ ಕೆಟ್ಟ ಸಂದೇಶ ಹೋಗಿದೆ” ಎಂದರು.
“ಇನ್ನು ಕೆಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಇನ್ನು ಐದಾರು ಜನರ ಪ್ರಾಣ ಅಪಾಯದಲ್ಲಿದೆ. ಮಕ್ಕಳ ಬಗ್ಗೆ ಕನಸು ಕಂಡ ಪೋಷಕರ ಕಣ್ಣೀರು ಹೇಳತೀರದು. ನಾನು ರಾಜಕೀಯ ಜೀವನದಲ್ಲಿ ಇಂತಹ ಘಟನೆಯನ್ನು ಎಂದೂ ಕಂಡಿಲ್ಲ. ಇದೊಂದು ದುರದುಷ್ಟಕರ ಘಟನೆಯಾಗಿದೆ. ಇದರಲ್ಲಿ ಸರ್ಕಾರ ಸೇರಿದಂತೆ ಎಲ್ಲರ ತಪ್ಪಿದೆ. ಸರ್ಕಾರ ತೆಗೆದುಕೊಂಡ ಕ್ರಮ ಸ್ವಾಗತಾರ್ಹ” ಎಂದು ತಿಳಿಸಿದರು.
“ಕ್ರಿಕೆಟ್ ಹುಚ್ಚು ಗ್ರಾಮೀಣ ಭಾಗದಲ್ಲೂ ಹಬ್ಬಿದೆ. ಈ ಪ್ರಕರಣದಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ. ತನಿಖೆಗೆ ಸಮಿತಿ ನೇಮಿಸಿದ್ದಾರೆ. ಇನ್ನು ಯಾರಾದರೂ ತಪ್ಪು ಮಾಡಿದ್ರೆ ಅವರ ಮೇಲೂ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಿ. ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಲು ಸಾಕಷ್ಟು ಕಷ್ಟ ಪಡುತ್ತಾರೆ. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ್ಳೆಯ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಥರ ಶಿಕ್ಷೆಯಾಗಬೇಕು. ಇಲ್ಲದಿದ್ದರೆ ಜನ ಹೇದರುವುದಿಲ್ಲ. ಆರ್ಸಿಬಿ ಆಡಳಿತ ಮಂಡಳಿ ವಿರುದ್ಧವೂ 10 ಕೇಸ್ ಹಾಕಲಿ. ಕ್ರಿಕೆಟ್ ಅಂದ್ರೆ ಏನು ಬೇಕಾದ್ರೂ ಮಾಡಬಹುದಾ? ಸ್ಟೇಡಿಯಂ ಎಷ್ಟಿದೆ. ಎಷ್ಟು ಜನ ಬರುತ್ತಾರೆ ಎಂಬ ನಿರೀಕ್ಷೆ ಇರಲಿಲ್ವಾ? ಸಂಭ್ರಮಾಚರಣೆ ಆತುರದಲ್ಲಿ ಮಾಡುವ ಅವಶ್ಯಕೆ ಏನಿತ್ತು?” ಎಂದು ಪ್ರಶ್ನಿಸಿದರು.
Laxmi News 24×7