ಮೈಸೂರು: ಐಪಿಎಲ್ ಫೈನಲ್ ಗೆಲ್ಲಲು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಲಿವೆ. ಅಂತಿಮ ಘಟ್ಟದಲ್ಲಿ ಬೆಂಗಳೂರು ತಂಡ ಗೆಲುವು ಸಾಧಿಸಲೆಂದು ಮೈಸೂರಿನ ಉದ್ಯಮಿಯೊಬ್ಬರು ತಮ್ಮ ದುಬಾರಿ ಬೆಲೆಯ ಕಾರಿಗೆ RCB ತಂಡದ ಆಟಗಾರರ ಪೋಸ್ಟರ್ಗಳನ್ನು ಹಾಕುವ ಮೂಲಕ ಗಮನ ಸೆಳೆದಿದ್ದಾರೆ.
ಗುಜರಾತ್ನ ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ RCB ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲ್ಲಲೆಂದು ಚಾಮುಂಡಿ ಬೆಟ್ಟಕ್ಕೆ ಹೋಗಿ ನಾಡಿನ ಅಧಿದೇವತೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆಯ ಬಳಿಕ ಈ ಕಾರು ಬೆಂಗಳೂರಿಗೆ ಹೊರಟಿತು.ಹೆಬ್ಬಾಳು ಕೈಗಾರಿಕಾ ಪ್ರದೇಶದ ಕಾರ್ಮೆಡ್ನಲ್ಲಿ ದೀಪಕ್, ಶ್ರೇಯಸ್ ಹಾಗೂ ಪ್ರಣೀತ್ ಎಂಬವರು ವಿಶೇಷ ಕಾರನ್ನು ಸಿದ್ಧಪಡಿಸಿದ್ದು, ಕಾರಿನ ತುಂಬೆಲ್ಲ ಆರ್ಸಿಬಿ ಆಟಗಾರರ ಸ್ಟಿಕ್ಕರ್ ಅಂಟಿಸಿದ್ದನ್ನು ಕಂಡು ಸಾಂಸ್ಕೃತಿಕ ನಗರಿಯಲ್ಲಿ ಆರ್ಸಿಬಿ ಜೋಶ್ ಮುಗಿಲು ಮುಟ್ಟಿತ್ತು.
ಕಾರಿನ ಮುಂಭಾಗ ಕನ್ನಡದಲ್ಲಿ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಎಂದು ಹೆಸರು ಬರೆಸಿದ ಅಭಿಮಾನಿಗಳು, ಒಂದು ಬದಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಇತರ ಆಟಗಾರರ ಸ್ಟಿಕ್ಕರ್ ಅಂಟಿಸಿದ್ದಾರೆ. ಮತ್ತೊಂದು ಬದಿ ಐಪಿಎಲ್ ಟ್ರೋಪಿ ಗೆದ್ದ ಮಹಿಳಾ ತಂಡದ ಸ್ಟಿಕ್ಕರ್ ಅಂಟಿಸಿದ್ದಾರೆ.
“ಹೆಬ್ಬಾಳು ಕೈಗಾರಿಕಾ ಪ್ರದೇಶದ ಕಾರ್ಮೆಡ್ನಲ್ಲಿ ಈ ಕಾರನ್ನು ವಿಶೇಷವಾಗಿ ಸಿದ್ದಪಡಿಸಲಾಗಿದ್ದು, ಚಾಮುಂಡಿ ಬೆಟ್ಟಕ್ಕೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿದ್ದೇವೆ. ತಂಡದ ಗೆಲುವಿಗಾಗಿ ಮೈಸೂರು ಹಾಗೂ ಬೆಂಗಳೂರಿನಲ್ಲಿ ಈ ಕಾರಿನಲ್ಲಿ ಸಂಚರಿಸಿ ಅಭಿಮಾನಿಗಳಲ್ಲಿ ಜೋಶ್ ತುಂಬುತ್ತೇವೆ” ಎಂದು ದೀಪಕ್, ಶ್ರೇಯಸ್ ಹಾಗೂ ಪ್ರಣೀತ್ ಹೇಳಿದರು.
Laxmi News 24×7