ಹಾವೇರಿ: ದಿವಂಗತ ಪುನೀತ್ ರಾಜ್ಕುಮಾರ್ ಅವರು ಐಪಿಎಲ್ನಲ್ಲಿ ಆರ್ಸಿಬಿ ಕಪ್ ಗೆಲ್ಲುವ ಕನಸು ಕಂಡಿದ್ದರು. ನಮ್ಮ ತಂಡ ಫೈನಲ್ ಪ್ರವೇಶಿಸಬೇಕು, ಮೈದಾನದಲ್ಲಿ ಫೈನಲ್ ಪಂದ್ಯವನ್ನು ಕುಳಿತು ನೋಡಬೇಕು ಎಂದು ಅವರು ಹೇಳುತ್ತಿದ್ದರು. ಆದರೆ, ಆ ಆಸೆ ಈಡೇರಲಿಲ್ಲ.
ಇದೀಗ ಆರ್ಸಿಬಿ ಫೈನಲ್ ತಲುಪಿದೆ. ನಾಳೆ ಸಂಜೆ ನಡೆಯುವ ಪಂದ್ಯದಲ್ಲಿ ಎದುರಾಳಿ ಪಂಜಾಬ್ ಕಿಂಗ್ಸ್ ಜೊತೆ ಸೆಣಸಲಿದೆ. ಈ ಮಧ್ಯೆ ಹಾವೇರಿ ತಾಲೂಕು ಯಲಗಚ್ಚ ಗ್ರಾಮದಲ್ಲಿ ಪುನೀತ್ ರಾಜ್ಕುಮಾರ್ ದೇವಾಲಯ ಕಟ್ಟಿಸಿರುವ ಪ್ರಕಾಶ್ ಎಂಬವರು, ಆರ್ಸಿಬಿ ಗೆಲುವಿಗಾಗಿ ಪೂಜೆ ಸಲ್ಲಿಸಿದ್ದಾರೆ. ದೇವಾಲಯದಲ್ಲಿರುವ ಪುನೀತ್ ಮೂರ್ತಿಗೆ ವಿಭೂತಿ, ಕುಂಕುಮ ಹಚ್ಚಿ, ತಿಲಕವಿಟ್ಟು ಪೂಜೆ ಸಲ್ಲಿಸಿದರು. ತನ್ನ ನೆಚ್ಚಿನ ನಾಯಕನ ಕನಸು ನನಸಾಗಲೆಂದು ಪ್ರಾರ್ಥಿಸಿದರು.
ಪುನೀತ್ ರಾಜ್ಕುಮಾರ್ ದೇವಾಲಯಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ತೆಂಗಿನಕಾಯಿ ಮೇಲೆ ಕರ್ಪೂರ ಇಟ್ಟು ಬೆಳಗಲಾಯಿತು. ನಂತರ ತೆಂಗಿನಕಾಯಿ ಒಡೆದು ಬಾಳೆಹಣ್ಣು ನೈವೇದ್ಯ ಸಲ್ಲಿಸಲಾಯಿತು. ಯಲಗಚ್ಚ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು. ದೇವಾಲಯದಲ್ಲಿ ಕೇಕ್ ಕಟ್ ಮಾಡಿದ ಪ್ರಕಾಶ್, ಚಾಕೊಲೇಟ್ ಹಂಚಿ ಸಂಭ್ರಮಿಸಿದರು.
“ಡಾ.ಪುನೀತ್ ರಾಜ್ಕುಮಾರ್ ಅವರು ಕನ್ನಡ ನಾಡು, ನುಡಿ, ಭಾಷೆ ವಿಚಾರದಲ್ಲಿ ಯಾವಾಗಲೂ ಮುಂದಿರುತ್ತಿದ್ದರು. ಹಲವು ಸಂಸ್ಥೆಗಳಿಗೆ ಉಚಿತವಾಗಿ ಅಂಬಾಸಿಡರ್ ಆಗಿದ್ದರು. ಆರ್ಸಿಬಿ ತಂಡದ ಅಂಬಾಸಿಡರ್ ಸಹ ಆಗಿದ್ದರು. ನಮ್ಮ ತಂಡ ಫೈನಲ್ ಗೆಲ್ಲಬೇಕು, ಐಪಿಎಲ್ ಕಪ್ ಎತ್ತಿ ಹಿಡಿಯಬೇಕು ಎಂದು ಕನಸು ಕಂಡಿದ್ದರು. ಆದರೆ, ದುರಾದೃಷ್ಟವಶಾತ್ ಅವರು ಈಗ ನಮ್ಮ ಜೊತೆಗಿಲ್ಲ. ಆದರೆ ಆರ್ಸಿಬಿ ಫೈನಲ್ ತಲುಪಿದೆ. ಆರ್ಸಿಬಿ ಫೈನಲ್ ಗೆದ್ದರೆ ಪುನೀತ್ ರಾಜ್ಕುಮಾರ್ ಅವರ ಕನಸು ನನಸಾಗಲಿದೆ” ಎಂದು ಪ್ರಕಾಶ್ ತಿಳಿಸಿದರು.
ವಿದ್ಯಾರ್ಥಿನಿ ಸಿಂಧೂ ಮಾತನಾಡಿ, “ಆರ್ಸಿಬಿ ಫೈನಲ್ನಲ್ಲಿ ಗೆಲ್ಲಲೆಂದು ನಾವು ಬಯಸುತ್ತೇವೆ. ಈ ಸಲ ಕಪ್ ನಮ್ದೇ ಆಗಲಿ ಎಂದು ಅಪ್ಪು ಸರ್ ಬಳಿ ಬೇಡಿಕೊಳ್ಳಲು ಬಂದಿದ್ದೇವೆ” ಎಂದರು.
Laxmi News 24×7