ಬೆಂಗಳೂರು: ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ವಿರುದ್ಧ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ. ಸರ್ಕಾರವನ್ನು ಬ್ಲ್ಯಾಕ್ ಮೇಲ್ ಮಾಡಲು ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಕಾಲದಲ್ಲಿ ಈ ಕೆನಾಲ್ ಯೋಜನೆ ಮಂಜೂರಾತಿ ಆಗಿದೆ. ಯಡಿಯೂರಪ್ಪ ಅಧಿಕಾರದಲ್ಲಿ ಯೋಜನೆಗೆ ತಡೆ ನೀಡಿದ್ದರು. ಆಗ ಯೋಜನೆ ವೆಚ್ಚ 600 ಕೋಟಿ ರೂ ಇತ್ತು. ಈಗ ಯೋಜನಾ ವೆಚ್ಚ ಸುಮಾರು 900 ಕೋಟಿ ರೂ.ನಿಂದ ಸಾವಿರ ಕೋಟಿಗೆ ತಲುಪಿದೆ. ಈಗಾಗಲೇ 400 ಕೋಟಿ ರೂ. ಬಿಡುಗಡೆಯಾಗಿದೆ. ಕೆಲಸವೂ ಆರಂಭವಾಗಿದೆ ಎಂದರು.
ಬಿಜೆಪಿಯವರಿಗೆ ಅಸೂಯೆ ಅಷ್ಟೇ. ಕುಣಿಗಲ್ನವರಿಗೆ 91% ಕುಡಿಯುವ ನೀರಿನ ಕೊರತೆ ಇದೆ. 2014ರಿಂದ ಇಲ್ಲಿವರೆಗೆ ಕುಣಿಗಲ್ಗೆ ನೀರು ಹೋಗಬೇಕಿತ್ತು. ಅದರೆ 10% ನೀರೂ ಹೋಗಿಲ್ಲ. ಈ ಯೋಜನೆಯಿಂದ ತುಮಕೂರಿನವರಿಗೆ ಯಾವುದೇ ತೊಂದರೆ ಆಗಲ್ಲ. ಕುಣಿಗಲ್ಗೆ 3 ಟಿಎಂಸಿ ಹಾಗೂ ಮಾಗಡಿಗೆ 0.6 ಟಿಎಂಸಿ ನೀರು ಹೋಗಲಿದೆ. ರಾಮನಗರಕ್ಕೆ ಈ ನೀರಿನ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಂತರರಾಜ್ಯ ವಿಚಾರ ಇದಲ್ಲ. ತಾಂತ್ರಿಕ ತಂಡ ಮಾಡಲು ತುಮಕೂರು ಶಾಸಕರು ಮನವಿ ಮಾಡಿದ್ದರು. ಅದರಂತೆ ಸಮಿತಿ ರಚಿಸಿ, ತಾಂತ್ರಿಕ ವರದಿಯೂ ಬಂತು. ಈಗ ಅವರು ಕಾನೂನು ಕೈಗೆ ತಗೊಂಡ್ರೆ ಹೇಗೆ?. ನೀವು ಏನು ಶಬ್ದ ಬಳಸಿದ್ದೀರಿ. ಅದಕ್ಕಿಂತ ದೊಡ್ಡ ಶಬ್ದ ಬಳಸುವ ಶಕ್ತಿ ನನಗೆ ಇದೆ. ಆದರೆ ನಾನು ಆ ಬಗ್ಗೆ ಮಾತನಾಡುವುದಿಲ್ಲ. ಜನರ ಹಿತಕ್ಕೆ ನಾವು ಇರುವುದು. ಕುಣಿಗಲ್ ಅವರು ಬೇರೆಯವರ?. ಅವರೂ ತುಮಕೂರಿನವರು. ನೀವು ಸರ್ಕಾರವನ್ನು ಬ್ಲ್ಯಾಕ್ ಮೇಲ್ ಮಾಡಲಾಗುವುದಿಲ್ಲ. ನೀವು ಏಕೆ ಎಲ್ಲಾ ಸ್ವಾಮೀಜಿಗಳನ್ನು ಕರೆಸುತ್ತಿದ್ದೀರ?. ಸ್ವಾಮೀಜಿಗಳಿಗೂ ಇದಕ್ಕೂ ಸಂಬಂಧ ಏನು?. ಕಾನೂನು ಕೈಗೆ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.
Laxmi News 24×7