ರಾಯಚೂರು, : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು (RCB) ಮೇ 29 ರಂದು ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಭರ್ಜರಿ ಗೆಲ್ಲುವು ದಾಖಲಿಸಿ ಐಪಿಎಲ್ ಫೈನಲ್ (IPL) ಪ್ರವೇಶಿಸಿತ್ತು. ಆರ್ಸಿಬಿ ಅಭಿಮಾನಿಗಳು ರಾಜ್ಯದಾದ್ಯಂತ ಸಂಭ್ರಮಾಚರಣೆ ಮಾಡಿದ್ದರು. ಅನೇಕ ಕಡೆಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗಿತ್ತು. ಗಡಿ ಜಿಲ್ಲೆ ರಾಯಚೂರಿನಲ್ಲಿ ಯುವಕರ ಗುಂಪೊಂದು ಪೆಟ್ರೋಲ್ ಬಾಂಬ್ ರೀತಿಯಲ್ಲಿ ಪೆಟ್ರೋಲ್ ಚೀಲಗಳನ್ನು ಸಿಡಿಸಿ ಸಂಭ್ರಮ ಆಚರಣೆ ಮಾಡಿದ್ದು, ಇದೀಗ ಜೈಲು ಪಾಲಾಗಿದೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದ ಯುವಕರ ಗುಂಪು ಆರ್ಸಿಬಿ ಪರಘೋಷಣೆಗಳನ್ನು ಕೂಗುತ್ತಾ, ಪಟಾಕಿ ಹಾಗೂ ಪೆಟ್ರೋಲ್ ಚೀಲಗಳನ್ನು ಸಿಡಿಸಿ ನಡು ರಸ್ತೆಯಲ್ಲಿ ಹುಚ್ಚಾಟ ಮೆರೆದಿತ್ತು.
ಪೆಟ್ರೋಲ್ ಚೀಲಗಳು ಭಯಾನಕವಾಗಿ ಸಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ನಡು ರಸ್ತೆಯಲ್ಲೇ ಭಯಾನಕ ಸ್ಪೋಟ
ಪ್ಲಾಸ್ಟಿಕ್ ಚೀಲದಲ್ಲಿ ಪೆಟ್ರೋಲ್ ತುಂಬಿದ್ದ ಯುವಕರ ತಂಡ ಅದನ್ನು ನಡು ರಸ್ತೆಯಲ್ಲಿಟ್ಟು, ಆ ಚೀಲದ ಮೇಲೆ ಅಡುಗೆಗೆ ಬಳಸುವ ಹಿಟ್ಟನ್ನು ಇಟ್ಟಿದ್ದರು. ರಸ್ತೆಯಲ್ಲಿ ವಾಹನಗಳು ಓಡಾಡುತ್ತಿರುವುದನ್ನು ಕ್ಯಾರೆ ಮಾಡದೆ ಚೀಲವನ್ನು ಸ್ಪೋಟಿಸಿದ್ದರು. ಸ್ಫೋಟದ ಭಯಾನಕ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.