ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರ್ಷಧಾರೆಯ ಅಬ್ಬರ ಮುಂದುವರೆದಿದೆ. ಮಳೆ ಅವಾಂತರಕ್ಕೆ ಮಂಗಳೂರಿನಲ್ಲಿ ಕಾರೊಂದು ರಾಜಕಾಲುವೆಗೆ ಬಿದ್ದರೆ, ಮೂಡಬಿದಿರೆಯಲ್ಲಿ ಮಹಿಳೆಯೊಬ್ಬರು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66ರ ಕೋಡಿಕಲ್ ಕ್ರಾಸ್ ಬಳಿಯ ರಾಜಕಾಲುವೆಗೆ ಸಂಚಾರದಲ್ಲಿದ್ದ ಕಾರೊಂದು ಬಿದ್ದಿರುವ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ. ಕೋಡಿಕಲ್ ಕ್ರಾಸ್ ಬಳಿ ರಾಜಕಾಲುವೆಯ ಹೂಳೆತ್ತುವ ಕಾರ್ಯ ನಡೆಯುತ್ತಿತ್ತು. ಅದಕ್ಕಾಗಿ ರಾಜಕಾಲುವೆ ಬದಿಯಲ್ಲಿ ಬೆಳೆದಿದ್ದ ಪೊದೆಗಿಡಗಳನ್ನು ತೆಗೆದು, ಮರಳು ತುಂಬಿದ ಚೀಲಗಳನ್ನು ತಡೆಯಾಗಿ ಇಡಲಾಗಿತ್ತು. ಆದರೆ ಇಂದು ಬೆಳಗ್ಗೆ ಕಾರು ನಿಯಂತ್ರಣ ಕಳೆದುಕೊಂಡು ರಾಜಕಾಲುವೆಗೆ ಬಿದ್ದಿದೆ.
ಅದೃಷ್ಟವಶಾತ್, ರಾಜಕಾಲುವೆಯಲ್ಲಿ ನೀರಿನ ಮಟ್ಟ ಕಡಿಮೆ ಇದ್ದಿದ್ದರಿಂದ ಕಾರಿನಲ್ಲಿದ್ದವರು ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾರೆ. ಸದ್ಯ ಕಾರನ್ನು ರಾಜಕಾಲುವೆಯಿಂದ ಮೇಲೆತ್ತಲಾಗಿದೆ.