ಚಿಕ್ಕೋಡಿ (ಬೆಳಗಾವಿ): ಎತ್ತಿನ ಗಾಡಿ ಆಯತಪ್ಪಿ ಹಳ್ಳಕ್ಕೆ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಹಾಗೂ ಒಂದು ಎತ್ತು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರ ಪಿಎ ಗ್ರಾಮದಲ್ಲಿ ಮಂಗಳವಾರ (ಮೇ 27) ನಡೆದಿದೆ.
ಗಣೇಶ್ ಸಂಜು ಕಾಂಬಳೆ (9), ದೀಪಕ್ ಸಂಜು ಕಾಂಬಳೆ (11) ಮೃತ ಅಣ್ಣ- ತಮ್ಮ. ಎತ್ತಿನಗಾಡಿಯಲ್ಲಿ ಸಂಬರಗಿಯಿಂದ ನಾಗನೂರ ಪಿಎ ಗ್ರಾಮಕ್ಕೆ ಹೋಗುತ್ತಿದ್ದಾಗ ದಾರಿಮಧ್ಯದಲ್ಲಿ ಈ ಅವಘಡ ಸಂಭವಿಸಿದೆ. ಒಟ್ಟು ನಾಲ್ಕು ಜನ ಹಳ್ಳವನ್ನು ದಾಟುತ್ತಿದ್ದರು. ಇದರಲ್ಲಿ ಅದೃಷ್ಟವಶಾತ್ ಓರ್ವ ಬಾಲಕ ವೇದಾಂತ್ ಕಾಂಬಳೆ ಹಾಗೂ ದಿಲೀಪ್ ಕಾಂಬಳೆ ಎಂಬ ರೈತ ಬದುಕುಳಿದಿದ್ದಾರೆ.
ಇವರಿಬ್ಬರನ್ನು ಎತ್ತು ಮೇಲಕ್ಕೆ ಎಳೆದುಕೊಂಡು ಬಂದು ಪ್ರಾಣ ಉಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳೀಯರ ಸಹಾಯದಿಂದ ಇಬ್ಬರ ಮಕ್ಕಳ ಶವಗಳನ್ನು ಹೊರ ತೆಗೆಯಲಾಗಿದೆ. ಕಳೆದ ನಾಲ್ಕು ದಿನದ ಹಿಂದೆ ಈ ಭಾಗದಲ್ಲಿ ಅಪಾರ ಪ್ರಮಾಣದ ಮಳೆ ಸುರಿದು ಅಲ್ಪ ಪ್ರಮಾಣದ ನೀರು ಹಳ್ಳದಲ್ಲಿ ಶೇಖರಣೆಯಾಗಿತ್ತು. ಹಳ್ಳ ದಾಟುವಾಗ ಏಕಾಏಕಿ ಎತ್ತಿನಗಾಡಿ ಪಲ್ಟಿ ಆಗುತ್ತಿದ್ದಂತೆ ನಾಲ್ವರು ನೀರಿಗೆ ಬಿದ್ದಿದ್ದರು. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಹು ವರ್ಷಗಳಿಂದ ಈ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡುವಂತೆ ಬೇಡಿಕೆ ಇದೆ. ಸ್ಥಳೀಯ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇವತ್ತು ಮೂರು ಜೀವಗಳು ಬಲಿಯಾಗಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.