ರಾಮನಗರ: “ರಾಮನ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು, ತಮ್ಮ ಅವಧಿಯಲ್ಲಿ ಜಿಲ್ಲೆಗೆ ಕೊಟ್ಟಿರುವ ಕೊಡುಗೆ ಮುಂದಿಟ್ಟು ಮಾತನಾಡಲಿ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಪ್ರತಿಪಕ್ಷಗಳ ನಾಯಕರ ವಿರುದ್ಧ ಹರಿಹಾಯ್ದರು.
ರಿಯಲ್ ಎಸ್ಟೇಟ್ ಉತ್ತೇಜನಕ್ಕೆ ರಾಮನಗರ ಜಿಲ್ಲೆ ಹೆಸರು ಬದಲಾವಣೆ ಮಾಡಲಾಗಿದೆ, ರಾಮನಗರದಲ್ಲಿ ಯಾರು ನಿವೇಶನ ಖರೀದಿಸಿದ್ದಾರೆಂದು ಹೆಸರು ಬಹಿರಂಪಡಿಸಲಿ ಎಂಬ ವಿಜಯೇಂದ್ರ ಅವರ ಟೀಕೆ ಕುರಿತು ಮಾತನಾಡಿದ ಅವರು, “ಈ ರೀತಿ ಹೇಳುತ್ತಿರುವವರೇ ಇದನ್ನು ಬಹಿರಂಗಪಡಿಸಬೇಕಲ್ಲವೇ? ಅವರು ಸ್ಥಿಮಿತ ಇಲ್ಲದೇ ಮಾತನಾಡಿದರೆ ಅದಕ್ಕೆ ನಾನೇನು ಮಾಡಲು ಸಾಧ್ಯ? ರಾಮನಗರ ತಾಲೂಕು ಈ ಹಿಂದೆ ಕ್ಲೋಸ್ ಪೇಟೆ ಎಂದಿತ್ತು. ಈ ವಿಚಾರ ವಿಜಯೇಂದ್ರ ಅವರಿಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ನಾವು ರಾಮನಗರ ತಾಲೂಕಿನ ಹೆಸರನ್ನು ಬದಲಾವಣೆ ಮಾಡಿಲ್ಲ. ಬೆಂಗಳೂರು ಜಿಲ್ಲೆಯ ಭಾಗವಾಗಿದ್ದ ಈ ಪ್ರದೇಶವನ್ನು ಅದೇ ರೀತಿ ಮುಂದುವರಿಸಲು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಇಲ್ಲಿ ಬೇರೆಯವರ ಆಸ್ತಿ ಬರೆಸಿಕೊಳ್ಳುವ ಪ್ರಶ್ನೆ ಇಲ್ಲ. ಜಿಲ್ಲೆಯ ಹೆಸರಿನ ಮೇಲೆ ಅನಗತ್ಯ ರಾಜಕಾರಣ ಮಾಡುವುದನ್ನು ಬಿಟ್ಟು ನಿಮ್ಮ ಕಾಲದಲ್ಲಿ ಈ ಜಿಲ್ಲೆಗೆ ನೀಡಿರುವ ಕೊಡುಗೆ ಏನೆಂದು ಹೇಳಿ” ಎಂದು ತಿರುಗೇಟು ನೀಡಿದರು.
ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣದಿಂದ ರೈತರು, ಯುವಕರು ಸಂತೋಷಪಡುತ್ತಿದ್ದಾರೆ. ಬೆಂಗಳೂರು ಹೆಸರಿದ್ದರೆ ನಮ್ಮ ಕಾಲೇಜು ಹಾಗೂ ವಿವಿಗಳಿಗೆ ಗೌರವ ಸಿಗುತ್ತದೆ, ಉದ್ಯೋಗ ಸಿಗುತ್ತದೆ ಎಂದು ಭಾವಿಸಿದ್ದಾರೆ. ಈ ವಿಚಾರದಲ್ಲಿ ಜನ ಸಂತೋಷವಾಗಿದ್ದಾರೆ. ಕೆಲವು ರಾಜಕಾರಣಿಗಳು ರಾಜಕೀಯಕ್ಕಾಗಿ ರಾಮನ ಹೆಸರು ಬಳಸುತ್ತಿದ್ದಾರೆ. ಇದನ್ನು ಬಿಟ್ಟು, ಅಭಿವೃದ್ಧಿಯ ಸಂಕೇತ ಇಟ್ಟುಕೊಂಡು ಬಿಜೆಪಿ ಅಧ್ಯಕ್ಷರು ಚರ್ಚೆ ಮಾಡಲಿ. ಅವರು ಕರ್ನಾಟಕ ಹಾಗೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಬೇಕು. ಕೃಷ್ಣಾ ಮೇಲ್ದಂಡೆ, ಕಳಸಾ ಬಂಡೂರಿ, ಮೇಕೆದಾಟು ಯೋಜನೆಗೆ ಅನುಮತಿ ನೀಡುವುದು ವಿಳಂಬ ಮಾಡುತ್ತಿರುವ ಅವರ ನಾಯಕರಿಗೆ ತಿಳಿ ಹೇಳಬೇಕು. ಇದು ಅವರ ಮುಖ್ಯ ಕರ್ತವ್ಯ. ನೀವು ರಾಮನಗರ ವಿಚಾರ ಬಿಟ್ಟು, ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ನೀವು ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಗಮನ ಹರಿಸಿ ಎಂದರು