ಹಾವೇರಿ: ಹೊಸ ಬೈಕ್ ಖರೀದಿಸಿ ಸಂಭ್ರಮದಿಂದ ಮನೆಗೆ ಹೋಗುತ್ತಿದ್ದ ಯುವಕರಿಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಹಾವೇರಿ ಸಮೀಪದ ಗೌರಾಪುರ ಗ್ರಾಮದ ಬಳಿ ಸೋಮವಾರ ನಡೆದಿದೆ.
ಜಿಲ್ಲೆ ಹಾನಗಲ್ ತಾಲೂಕಿನ ವರ್ದಿ ಗ್ರಾಮದ 25 ವರ್ಷದ ನಾಗರಾಜ್ ಪವಾಡಿ ಮತ್ತು ಶಂಕರಿಕೊಪ್ಪ ಗ್ರಾಮದ 25 ವರ್ಷದ ಮಲ್ಲೇಶಪ್ಪ ದೇವಿಹೊಸೂರು ಮೃತ ಯುವಕರು. ಹೊಸ ಬೈಕ್ ತೆಗೆದುಕೊಂಡು ಊರಿಗೆ ಹೊರಟಿದ್ದ ನಾಗರಾಜ್ ಅವರ ಬೈಕ್ ಮತ್ತು ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಸಾವಿನಲ್ಲೂ ಒಂದಾದ ಅಳಿಯ-ಮಾವ: ಮೃತ ನಾಗರಾಜ್ ಮತ್ತು ಮಲ್ಲೇಶಪ್ಪ ಇಬ್ಬರು ಸಂಬಂಧಿಕರು. ಅಳಿಯ ಮಾವರಾಗಿದ್ದ ಇಬ್ಬರು ಇದೀಗ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಮನೆಗೆ ಸಂಭ್ರಮ ತರಬೇಕಾದ ಹೊಸ ಬೈಕ್ ಮನೆಯ ಮಗನನ್ನು ಕಳೆದುಕೊಳ್ಳುವಂತೆ ಮಾಡಿದೆ. ಸಂಬಂಧಿಕರಾಗಿದ್ದರೂ ಸ್ನೇಹಿತರಂತೆ ಇದ್ದ ಅಳಿಯ ಮಾವ ಯಾವಾಗಲೂ ಒಟ್ಟಿಗೆ ಇರುತ್ತಿದ್ದರು. ಈಗ ಸಾವಿನಲ್ಲಿ ಸಹ ಒಂದಾಗಿರುವುದು ದುರಂತ ಎಂದು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ಶವಗಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ತರಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಹಸ್ತಾಂತರಿಸಲಾಗುತ್ತದೆ. ಬೈಕ್ ಅಪಘಾತದಲ್ಲಿ ಮೃತಪಟ್ಟ ನಾಗರಾಜ ಅವರ ವರದಿ ಗ್ರಾಮ ಮತ್ತು ಮಲ್ಲೇಶ ಅವರ ಶಂಕರಿಕೊಪ್ಪದಲ್ಲಿ ದುಃಖ ಮಡುಗಟ್ಟಿದೆ. ಸಂಬಂಧಿಕರು ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ.
Laxmi News 24×7