ಕಾರವಾರ (ಉತ್ತರಕನ್ನಡ): ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಬಲಿಯಾದ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರಿ ಎರಡು ಗಂಟೆಗಳ ಕಾಲ ನಗರದ ಮಿತ್ರ ಸಮಾಜದ ಆವರಣದಲ್ಲಿ ಭಾನುವಾರ ಪುಟಾಣಿಗಳು ಸ್ಕೇಟಿಂಗ್ ಮಾಡಿದರು.
ಹಣಬರ್ ಸ್ಕೇಟಿಂಗ್ ಕ್ಲಬ್ನ ವತಿಯಿಂದ ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟವರನ್ನು ಸ್ಮರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕ್ಲಬ್ನ ಸುಮಾರು 200 ಮಕ್ಕಳು ಕ್ಯಾಂಡಲ್ ಹಿಡಿದು ಭಾರತದ ಭೂಪಟ ರಚನೆ ಮಾಡಿ, ಅದರ ಸುತ್ತ ಸ್ಕೇಟಿಂಗ್ ಮಾಡುವ ಮೂಲಕ ಮೃತರನ್ನು ಸ್ಮರಿಸಿದರು.ಕಾರ್ಯಕ್ರಮಕ್ಕೆ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಮೇಣದಬತ್ತಿ ಹಚ್ಚುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೈಲ್, “ಉಗ್ರರು ಪ್ರವಾಸಿಗರನ್ನು ಸಾಯಿಸುವ ಮೂಲಕ ಹೇಯ ಕೃತ್ಯ ಮಾಡಿರುವುದು ಖಂಡನೀಯ. ದೇಶದ ಸೈನ್ಯದ ಜೊತೆ, ದೇಶದ ಜೊತೆ ನಾವು ಸದಾ ಇದ್ದೇವೆ. ದೇಶದ ಭೂ, ನೌಕಾ, ವಾಯು ಸೈನ್ಯ ಉಗ್ರರಿಗೆ ತಕ್ಕ ಪಾಠ ಕಳಿಸಲಿದೆ. ನಮ್ಮಲ್ಲಿ ಇರುವ ಕದಂಬ ನೌಕಾದಳದ ಸೈನಿಕರು ಹೋರಾಡಲು ಸಿದ್ಧರಾಗಿದ್ದು ಇದು ನಮ್ಮ ಹೆಮ್ಮೆಯ ವಿಚಾರ. ಪ್ರವಾಸಕ್ಕೆಂದು ತೆರಳಿದ ಅಮಾಯಕರನ್ನು ಗುಂಡಿಕ್ಕಿ ಕೊಲ್ಲುವ ಮೂಲಕ ಉಗ್ರರು ತಮ್ಮ ಕ್ರೌರ್ಯ ತೋರಿಸಿದ್ದಾರೆ. ನಾವೆಲ್ಲ ಭಾರತೀಯರು ಈ ಸಂದರ್ಭದಲ್ಲಿ ಒಂದಾಗಿರೋಣ. ಮೃತರ ಕುಟುಂಬದ ಜೊತೆ ಇರಬೇಕು. ಇಂತಹ ಕೃತ್ಯ ಮುಂದೆ ಆಗದಂತೆ ಸೈನ್ಯ ಕ್ರಮ ಕೈಗೊಳ್ಳುವ ವಿಶ್ವಾಸ ಇದೆ” ಎಂದರು.