ಬೆಂಗಳೂರು: ಹಣಕಾಸಿನ ವಿಚಾರಕ್ಕಾಗಿ ವಿದೇಶಿ ಯುವತಿಯನ್ನು ಕೊಲೆಗೈದ ಆರೋಪದಡಿ ಘಾನಾ ದೇಶದ ಪ್ರಜೆಯನ್ನ ಚಿಕ್ಕಜಾಲ ಠಾಣೆ ಪೊಲೀಸರು ಸೆರೆಹಿಡಿದಿದ್ದಾರೆ. ನೈಜೀರಿಯಾ ಮೂಲದ ಲೋವಿತ್ (28) ಎಂಬ ಯುವತಿಯನ್ನು ಹತ್ಯೆಗೈದ ಆರೋಪದಡಿ ಸ್ಯಾಮನ್ಸ್ ಬಪುಂಗಾ ಎಂಬಾತನನ್ನ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.
ಏ.30ರಂದು ಬೆಟ್ಟಹಲಸೂರು ಮುಖ್ಯರಸ್ತೆಯ ತರಹುಣಸೆ ಗ್ರಾಮದ ನಿರ್ಜನ ಪ್ರದೇಶದಲ್ಲಿ ಯುವತಿ ಶವ ಪತ್ತೆಯಾಗಿತ್ತು. ಹತ್ಯೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು, ಆರೋಪಿಯನ್ನ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಯುವತಿ ಲೋವಿತ್ ವಾಸವಾಗಿದ್ದಳು. ಸ್ಯಾಮನ್ಸ್ ಕಳೆದ ಐದು ವರ್ಷಗಳ ಹಿಂದೆ ನಗರಕ್ಕೆ ಬಂದು ಬಿಟಿಎಂ ಲೇಔಟ್ನಲ್ಲಿ ವಾಸವಾಗಿದ್ದ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಕೆಲ ವರ್ಷಗಳ ಹಿಂದೆ ಲೋವಿತ್ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ ತಿರುಗಿದೆ. ಕಾಲಕ್ರಮೇಣ ಇಬ್ಬರು ಒಟ್ಟಿಗೆ ಓಡಾಡಿಕೊಂಡಿದ್ದರು. ಇದೇ ಆತ್ಮೀಯತೆಯಲ್ಲಿ ಸ್ನೇಹಿತೆಗೆ ಹಲವು ಬಾರಿ ಸಾಲ ನೀಡಿದ್ದ. ಹಲವು ತಿಂಗಳು ಕಳೆದರೂ ಸಾಲ ವಾಪಸ್ ನೀಡದೆ ಸತಾಯಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7