ಚಾಮರಾಜನಗರ: ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡುಹೊಲ ಗ್ರಾಮದ ಬಾವಿಯಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳ ಶವ ಪತ್ತೆಯಾಗಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡುಹೊಲ ಗ್ರಾಮದ ಸುಶೀಲ (30) ಮತ್ತು 8 ವರ್ಷದ ಮಗ, 11 ವರ್ಷದ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಕಾಡುಹೊಲ ಗ್ರಾಮದ ಸುಶೀಲ ಅವರ ಮನೆಗೆ ಸುಶೀಲರ ತಮ್ಮ ಮಾದೇವ ಆಗಮಿಸಿ ಭಾವ ಮಹೇಶ್ನ ಮೊಬೈಲ್ ಮತ್ತು ಹಣವನ್ನು ತೆಗೆದುಕೊಂಡು ಹೋಗಿದ್ದ ಎನ್ನಲಾಗಿದೆ. ಈ ಸಂಬಂಧ ಮಹೇಶ್ ಬಾಮೈದನಿಗೆ ಮೊಬೈಲ್ ಮತ್ತು ಹಣ ತೆಗೆದುಕೊಂಡು ಹೋಗಿರುವ ಬಗ್ಗೆ ದೂರವಾಣಿ ಕರೆ ಮಾಡಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ಸಂಬಂಧ ಮಹೇಶ್ ಅವರು ಹೆಂಡತಿ ಸುಶೀಲ ಅವರ ಜೊತೆ ಕಷ್ಟಪಟ್ಟು ಸಂಪಾದನೆ ಮಾಡಿರುವ ಹಣ ಮತ್ತು ಮೊಬೈಲ್ ಅನ್ನು ನಿನ್ನ ತಮ್ಮ ತೆಗೆದುಕೊಂಡು ಹೋಗಿದ್ದಾನೆ ಎಂದು ಜಗಳವಾಡಿದ್ದಾರೆ. ಇದರಿಂದ ಬೇಸತ್ತ ಸುಶೀಲ ತನ್ನ ಇಬ್ಬರು ಮಕ್ಕಳ ಜೊತೆ ಭಾನುವಾರ ರಾತ್ರಿ ಮನೆಯಿಂದ ತೆರಳಿ ಕಾಡುಹೂಲ ಸಮೀಪದಲ್ಲಿನ ಜಮೀನೊಂದರ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೋಮವಾರದಂದು ಜಮೀನಿನ ಮಾಲೀಕ ಬಾವಿಯಲ್ಲಿ ನೀರು ತರಲು ತೆರಳಿದಾಗ ಬಾವಿಯ ಬಳಿ ಚಪ್ಪಲಿ ಹಾಗೂ ತಾಳಿ ಇನ್ನಿತರ ವಸ್ತುಗಳು ಕಂಡು ಬಂದಿವೆ. ಬಳಿಕ ಪರಿಶೀಲಿಸಿದಾಗ ಬಾವಿಯಲ್ಲಿ ತಾಯಿ ಮತ್ತು ಮಕ್ಕಳ ಶವಗಳು ಪತ್ತೆಯಾಗಿವೆ ಎಂದು ತಿಳಿಸಿದರು.
Laxmi News 24×7