ಬೆಂಗಳೂರು: ಶಾಸಕ ಶಿವರಾಮ್ ಹೆಬ್ಬಾರ್ಗೂ ನಮ್ಮ ಪಕ್ಷಕ್ಕೂ ಮುಗಿದ ಅಧ್ಯಾಯ. ಅವರು ಈಗ ನಮ್ಮ ಪಕ್ಷದವರಲ್ಲ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದಲ್ಲಿ ನಾವು ಪ್ರತಿಭಟನೆ ಮಾಡುತ್ತಿದ್ದರೆ, ಹೆಬ್ಬಾರ್ ಅವರು ಕುಳಿತೇ ಇರುತ್ತಾರೆ. ಅವರನ್ನು ನಾವು ಕೈ ಬಿಟ್ಟಿದ್ದೇವೆ. ಶಿವರಾಮ್ ಹೆಬ್ಬಾರ್ಗೂ, ಬಿಜೆಪಿಗೂ ಸಂಬಂಧವಿಲ್ಲ ಎಂದರು.
ಜಾತಿ ಗಣತಿ ವರದಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯನವರು ಟೋಪಿ ಹಾಕಿಕೊಂಡು ಏಕೆ ಜಾತಿ ಗಣತಿ ವರದಿ ಹಿಂದೆ ಬಿದ್ದಿದ್ದಾರೋ ಗೊತ್ತಿಲ್ಲ. ಇದು ಹತ್ತು ವರ್ಷಗಳ ಹಿಂದೆ ಮಾಡಿರುವ ಸಮೀಕ್ಷೆ. ಈಗ ಜನಸಂಖ್ಯೆ ಹೆಚ್ಚಾಗಿದೆ. ಸಮೀಕ್ಷೆ ಮಾಡಿದಾಗ ಆರು ಕೋಟಿ ಇದ್ದರು. ಈಗ ಏಳು ಕೋಟಿ ಜನ ಇದ್ದಾರೆ. ಒಂದು ಕೋಟಿ ಜನರು ಸಮುದ್ರಕ್ಕೆ ಬೀಳಬೇಕಾ?. ಮುಸ್ಲಿಮರು ನಂ.1 ಎಂದಾದರೆ ಅಲ್ಪಸಂಖ್ಯಾತ ಮಾನ್ಯತೆ ಏಕೆ ಎಂದು ಪ್ರಶ್ನಿಸಿದರು.
ವಕ್ಫ್ ಕಾಯ್ದೆ ಜಾರಿಗೆ ಬಿಡಲ್ಲ ಎಂಬ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಗರಂ ಆದ ಅಶೋಕ್, ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ಮಾಡಲ್ಲ ಎನ್ನಲು ಜಮೀರ್ ಯಾರು?, ಕಂಡ ಜಾಗವನ್ನೆಲ್ಲ ವಕ್ಫ್ದು ಅಂತ ಹೇಳಲು ಬೋರ್ಡ್ಗೆ ಯುಪಿಎ ಸರ್ಕಾರ ಹೇಗೆ ಅಧಿಕಾರ ಕೊಟ್ಟಿತು?. ಪಾರ್ಲಿಮೆಂಟ್ ನಿರ್ಧಾರ ಅದು. ಮಾಡಲೇಬೇಕು. ಅಂಬೇಡ್ಕರ್ ಸಂವಿಧಾನ ಇದು. ಮಾಡಿಯೇ ಮಾಡಿಸ್ತೇವೆ. ಕಾಂಗ್ರೆಸ್ ಎಷ್ಟು ಸಾರಿ ಸಂವಿಧಾನ ಬದಲಾವಣೆ ಮಾಡಿಲ್ಲ. ವಕ್ಫ್ ಕಾಯ್ದೆ ಜಾರಿ ಮಾಡಿಯೇ ಮಾಡುತ್ತೇವೆ ಎಂದು ಹೇಳಿದರು.
ಉಚ್ಛಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೊಲೆ ಬೆದರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರಿಗೇ ಆಗಲಿ ಕೊಲೆ ಬೆದರಿಕೆ ಹಾಕಬಾರದು. ಹಿಂದುತ್ವದ ಪರ ಮಾತನಾಡುವ, ಹೋರಾಡುವ ಯಾರಿಗೇ ಆಗಲಿ ನಮ್ಮ ಬೆಂಬಲ ಇರಲಿದೆ. ಯತ್ನಾಳ್ ಅವರಿಗೆ ಕೊಲೆ ಬೆದರಿಕೆ ಹಾಕಿರುವುದನ್ನು ಖಂಡಿಸುತ್ತೇವೆ ಎಂದರು.
ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನಾ ದಾಳಿ ಕೇಳಿದ್ದೆವು. ಆದರೆ, ಕರ್ನಾಟಕದಲ್ಲಿ ತೆರಿಗೆ ದಾಳಿ ಆಗುತ್ತಿದೆ. ಭಯೋತ್ಪಾದಕರಂತೆ ತೆರಿಗೆ ದಾಳಿ ಮಾಡಲಾಗುತ್ತಿದೆ. ನಮ್ಮನ್ನ ಮನುವಾದಿಗಳು ಅಂತಾರೆ. ಆ ಮನು ಹೇಗಿದ್ದ ಎಂಬುದೇ ಗೊತ್ತಿಲ್ಲ. ಫೋಟೋ ಕೂಡ ನೋಡಿಲ್ಲ. ಇವ್ರು ಬಾಬರ್, ಅಕ್ಬರ್, ತುಘಲಕ್ ವಂಶಸ್ಥರು. ರಾಜ್ಯದಲ್ಲಿ ಶರಿಯಾ ಕಾನೂನು ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ವೀಲ್ಚೇರ್ ನಲ್ಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಫಾಸ್ಟ್ ಟ್ರ್ಯಾಕ್ ಅಲ್ಲಿದ್ದಾರೆ. ಅಧಿಕಾರ ಕಿತ್ತುಕೊಳ್ಳಲು ಟೆಂಪಲ್ ರನ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಮಹಿಳಾ ಪೊಲೀಸ್ ಗುಂಡಿಟ್ಟು ಕೊಂದಿರುವುದನ್ನು ಸ್ವಾಗತಿಸಿದ ಅಶೋಕ್ ಅವರು, ಯಾರೇ ಆಗಲೀ ಕೆಟ್ಟ ಕೆಲಸ ಮಾಡಿದರೆ ಅವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಬೇಕು ಎಂದು ಹೇಳಿದರು.
Laxmi News 24×7