ಚಿಕ್ಕೋಡಿ (ಬೆಳಗಾವಿ) : ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಚಿಂತನೆ ಪ್ರಾರಂಭವಾಗಿದೆ. ಸಂದರ್ಭಾನುಸಾರವಾಗಿ ಬಿಜೆಪಿಗೆ ಏನು ಉತ್ತರ ಕೊಡಬೇಕು ಅದನ್ನು ಮುಂದೆ ಈ ಭಾಗದ ಜನ ಕೊಡುತ್ತಾರೆ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಅಥಣಿ ಶಾಸಕ ಲಕ್ಷ್ಮಣ್ ಸವದಿ ಎಚ್ಚರಿಕೆ ನೀಡಿದರು.
ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಚಾಕ್ವೆಲ್ ಕಮ್ ಪಂಪ್ ಹೌಸ್ ನಿರ್ಮಾಣ ಹಂತಕ್ಕೆ ಪೂಜೆ ನೆರವೇರಿಸಿದ ಬಳಿಕ, ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಪಕ್ಷದ ಆಂತರಿಕ ವಿಚಾರ ಚರ್ಚೆ ಮಾಡುವುದು ಸೂಕ್ತವಲ್ಲ: ಇವತ್ತು ನಾನು ಕಾಂಗ್ರೆಸ್ ಪಕ್ಷದ ಸದಸ್ಯ. ಬೇರೆ ಪಕ್ಷದ ಬಗ್ಗೆ ಚಿಂತನೆ ಹಾಗೂ ಚರ್ಚೆ ಮಾಡುವುದು ಸೂಕ್ತವಲ್ಲ. ಆ ಪಕ್ಷದಲ್ಲಿ ಏನೇ ಆದರೂ ಅವರ ಪಕ್ಷಕ್ಕೆ ಬಿಟ್ಟು ಕೊಟ್ಟಿರುವಂತದ್ದು. ಅವರು ಏನೇನು ಮಾಡುತ್ತಾರೆ ಎಂಬುದರ ಬಗ್ಗೆ ನಾವು ಚಿಂತನೆ ಮಾಡುವುದು ಸರಿಯಲ್ಲ ಎಂಬುದು ನನ್ನ ಭಾವನೆ. ನಾನು ಕೂಡ ಹಿಂದೆ ಬಿಜೆಪಿಯಲ್ಲಿದ್ದೆ. ಈಗ ಇಲ್ಲ. ಸದ್ಯ ನಾನು ಕಾಂಗ್ರೆಸ್ ಪಕ್ಷದ ಶಾಸಕ. ಅವರ ಪಕ್ಷದ ಆಂತರಿಕ ವಿಚಾರ ಚರ್ಚೆ ಮಾಡುವುದು ಸೂಕ್ತವಲ್ಲ. ನಮಗೆ ಸಂಬಂಧಪಟ್ಟ ವಿಷಯವೂ ಅಲ್ಲ ಎಂದರು.
ಕೇಂದ್ರ ಸರ್ಕಾರ ವಕ್ಫ್ ಕಾನೂನಿಗೆ ತಿದ್ದುಪಡಿ ವಿಚಾರವಾಗಿ ಲಕ್ಷ್ಮಣ್ ಸವದಿ ಮಾತನಾಡಿ, ಸತ್ತ ಮೇಲೆ ಪೋಸ್ಟ್ ಮಾರ್ಟಂ ಮಾಡುವುದು ಅವಶ್ಯಕತೆ ಇಲ್ಲ. ವಕ್ಫ್ ಎಂಬುದು ಮುಗಿದುಹೋಗಿದೆ. ಎನ್.ಡಿ.ಎ ಮೈತ್ರಿ ಕೂಟ ಹೊರತುಪಡಿಸಿ ಎಲ್ಲ ಪಕ್ಷಗಳು ಕೂಡ ವಿರೋಧ ಮಾಡಿವೆ. NDA ಸರ್ಕಾರಕ್ಕೆ ಬಹುಮತ ಇರೋದರಿಂದ ಅವರು ಕಾನೂನನ್ನು ತಿದ್ದುಪಡಿ ಮಾಡಿದ್ದಾರೆ. ಮುಂದಿನ ದಿನದಲ್ಲಿ ಅದರ ಸಾಧಕ ಬಾಧಕ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ. ನ್ಯಾಯಾಲಯಗಳು ಇರುವುದರಿಂದ ಕೆಲವು ವರಿಷ್ಠರು ನ್ಯಾಯಾಲಯಕ್ಕೆ ಹೋಗುವ ಚರ್ಚೆಯನ್ನು ಮಾಡ್ತಾ ಇದ್ದಾರೆ. ಮುಂದೆ ಏನಾಗುತ್ತೆ ಎಂಬುದನ್ನು ನೋಡಿ ಈ ಬಗ್ಗೆ ಪ್ರತಿಕ್ರಿಯೆ ಕೊಡುತ್ತೇನೆ ಎಂದು ಹೇಳಿದರು.
ಎರಡು ಬೇಡಿಕೆಗಳನ್ನ ಈಡೇರಿಸಿದ್ದಾರೆ : ಗ್ಯಾರಂಟಿ ಯೋಜನೆಗಳ ಮಧ್ಯೆ ಅಥಣಿ ಕ್ಷೇತ್ರಕ್ಕೆ ಭರಪೂರ ಅನುದಾನ ಬಿಡುಗಡೆ ವಿಷಯವಾಗಿ ಮಾತನಾಡುತ್ತಾ, ಬಿಜೆಪಿ ಪಕ್ಷ ತೊರೆದು ನಾನು ಕಾಂಗ್ರೆಸ್ ಪಕ್ಷ ಸೇರುವಾಗಲೇ ಕರಾರುವಕ್ಕಾಗಿ ಕ್ಷೇತ್ರ ಅಭಿವೃದ್ಧಿ ಬಗ್ಗೆ ಅನುದಾನ ಕೇಳಿದೆ. ಕೆಲವು ಬೇಡಿಕೆಗಳನ್ನು ಮುಂದಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರಿದೆ. ಅದಕ್ಕೆ ಅನುಗುಣವಾಗಿಯೇ ನನಗೆ ಅನುದಾನ ಬಿಡುಗಡೆಯಾಗುತ್ತಿದೆ. ಬೃಹದಾಕಾರದ ಅಮ್ಮಾಜೇಶ್ವರಿಗೆ ನೀರಾವರಿ ಯೋಜನೆ, ಅಗ್ರಿ ಕಾಲೇಜು, ಪ್ರಮುಖವಾಗಿ ಮೂರು ಬೇಡಿಕೆಗಳನ್ನು ಇಡಲಾಗಿತ್ತು. ಎರಡು ಬೇಡಿಕೆಗಳನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಡೇರಿಸಿದ್ದಾರೆ. ಇನ್ನು ಒಂದು ಬೇಡಿಕೆ ಬಾಕಿ ಉಳಿದಿದೆ ಎಂದು ತಿಳಿಸಿದರು.
Laxmi News 24×7