ಬೆಂಗಳೂರು: ಗ್ಯಾರಂಟಿ ಅನುಷ್ಠಾನ ಸಮಿತಿಗಳಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಆದರೆ, ಶಾಸಕರ ಹಕ್ಕುಚ್ಯುತಿ ಆಗದಂತೆ ಸೂಚನೆ ನೀಡಲಾವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸಂಬಂಧ ಧರಣಿ ನಡೆಸುತ್ತಿದ್ದ ಪ್ರತಿಪಕ್ಷಗಳಿಗೆ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ, ನಾವು ಯಾವುದೇ ಶಾಸಕರ ಹಕ್ಕನ್ನು ಮೊಟಕು ಮಾಡುವುದಿಲ್ಲ. ಶಾಸಕರಿಗೆ ಎಷ್ಟು ಗೌರವ ಇದೆ ನನಗೂ ಅಷ್ಟೇ ಗೌರವ ಇದೆ. ನಿಮಗೆ ಅಗೌರವ ಆಗುವ ಕೆಲಸ ಮಾಡುವುದಿಲ್ಲ. ಕಾರ್ಯಕರ್ತರಿಗೆ ಅವಕಾಶ ನೀಡುವ ಪ್ರಕ್ರಿಯೆ ಮೊದಲಿನಿಂದಲೂ ನಡೆಯುತ್ತಾ ಬಂದಿದೆ ಎಂದರು.
ಪಕ್ಷದ ಕಾರ್ಯಕರ್ತರನ್ನು ಮಂಡಳಿ ಅಧ್ಯಕ್ಷರನ್ನಾಗಿ ಮಾಡುತ್ತೇವೆ. ಅವರಿಗೆ ಎಲ್ಲಿಂದ ಹಣ ಕೊಡುವುದು?. ಅದು ಹಣ ದುರುಪಯೋಗ ಆಗುತ್ತಾ?. ಮಹಾರಾಷ್ಟ್ರದಲ್ಲಿ ಆರ್ಎಸ್ಎಸ್ ಅವರನ್ನು ಸಚಿವರ ಪಿಎ ಮಾಡಲಾಗುತ್ತಿದೆ. ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ಬದಲಾವಣೆ ಮಾಡಲು ಹೋಗುವುದಿಲ್ಲ. ಆದರೆ, ಶಾಸಕರಿಗೆ ಅಗೌರವ ಆಗದಂತೆ ನಡೆದುಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಅಧಿವೇಶನದ ಬಳಿಕ ಶಾಸಕರ ಬಳಿ ಸಭೆ ನಡೆಸುತ್ತೇನೆ. ಹಕ್ಕುಚ್ಯುತಿ ಆಗದಂತೆ, ಅಗೌರವ ಅಗದಂತೆ ನಾನು ಭರವಸೆ ನೀಡುತ್ತೇನೆ ಎಂದು ಹೇಳಿದರು.