ಬೆಂಗಳೂರು: ಹಣ ರಾಜ್ಯ ಸರ್ಕಾರದ್ದು, ಹೆಸರು ಕೇಂದ್ರ ಸರ್ಕಾರದ್ದು ಎಂದಾದರೆ ಆರೋಗ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ತಿಳಿಸಿದರು.
ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಯುಷ್ಮಾನ್ ಭಾರತ – ಕರ್ನಾಟಕ ಯೋಜನೆಯ ಕೇಂದ್ರದ ಪಾಲು ಹೆಸರಿಗಷ್ಟೇ ಎಂಬಂತಾಗಿದೆ. ಕರ್ನಾಟಕವು ಶೇ.75ರಷ್ಟು ಪಾಲನ್ನು ಕೊಡುತ್ತಿದ್ದರೆ ಕೇಂದ್ರ ಕೇವಲ ಶೇ.25ರಷ್ಟನ್ನು ಮಾತ್ರ ಭರಿಸುತ್ತಿದೆ. ಕೇಂದ್ರವು ತನ್ನ ಪಾಲಿನ ಶೇ.60ರಷ್ಟು ಅನುದಾನ ಕೊಡಬೇಕು. ರಾಜ್ಯವು ಶೇ.40ರಷ್ಟನ್ನು ಭರಿಸಬೇಕು ಎಂಬುದು ಆಯುಷ್ಮಾನ್ ಯೋಜನೆಯ ನಿಯಮವಾಗಿ ಎಂದು ಹೇಳಿದರು.ವಯೋ ವಂದನ ಯೋಜನೆಗೆ ಕೇಂದ್ರದಿಂದ ಬದ್ಧತೆ ಅಗತ್ಯ: ಇದೇ ರೀತಿ ಮುಂದುವರೆದರೆ, ಕೇಂದ್ರದ ‘ವಯೋ ವಂದನ’ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡುವುದು ಅಸಾಧ್ಯ. ಇದು ಖಂಡಿತವಾಗಿಯೂ ಒಳ್ಳೆಯ ಯೋಜನೆ. ಆದರೆ ಇದನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕಾದರೆ ವರ್ಷಕ್ಕೆ 68.98 ಕೋಟಿ ರೂ. ಬೇಕಾಗುತ್ತದೆ. ಇದರಲ್ಲಿ 36.58 ಕೋಟಿ ರೂ.ಗಳಷ್ಟು ಕೇಂದ್ರ ಸರ್ಕಾರ ಭರಿಸಬೇಕು. ಈ ಬಗ್ಗೆ ಕೇಂದ್ರದಿಂದ ಬದ್ಧತೆ ದೊರಕಿದರೆ ಖಂಡಿತ ವಯೋ ವಂದನ ಯೋಜನೆಯನ್ನು ಜಾರಿಗೊಳಿಸುತ್ತೇವೆ. ಈ ಯೋಜನೆಗೆ ನಮ್ಮ ವಿರೋಧ ಇಲ್ಲ ಎಂದು ಗುಂಡೂರಾವ್ ಸ್ಪಷ್ಟಪಡಿಸಿದರು.
Laxmi News 24×7