ಬೆಳಗಾವಿ: ಪ್ರಯಾಗ್ರಾಜ್ ಮಹಾಕುಂಭ ಮೇಳದಲ್ಲಿ ಜರುಗಿದ ಕಾಲ್ತುಳಿತ ಪ್ರಕರಣದ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸ್ಪಷ್ಟನೆ ನೀಡಿದ್ದು, ”ಗಾಯಾಳುಗಳ ಕುರಿತು ಮಾಹಿತಿ ಸಿಕ್ಕಿಲ್ಲ. ಆದರೆ, ತೊಂದರೆಯಲ್ಲಿ ಸಿಲುಕಿದವರ ರಕ್ಷಣೆಗೆ ನಾವು ಸಿದ್ಧರಿದ್ದೇವೆ” ಎಂದರು.
ಮಹಾಕುಂಭ ಮೇಳದಲ್ಲಿ ತಮ್ಮವರು ತಪ್ಪಿಸಿಕೊಂಡಿರುವ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ್ದ ಬೆಳಗಾವಿಯ ಮಹಿಳೆ ಸರೋಜಿನಿ ಅವರು, “ನಾವು ಎರಡು ಬಸ್ಗಳಲ್ಲಿ 60 ಜನ ಮಹಾಕುಂಭ ಮೇಳಕ್ಕೆ ಬಂದಿದ್ದೇವೆ. ಇದ್ದಕ್ಕಿದ್ದಂತೆ ಕಾಲ್ತುಳಿತ ಉಂಟಾಯಿತು. ನಮ್ಮ ಜೊತೆ ಬಂದರಲ್ಲಿ ನಾಲ್ಕೈದು ಜನ ಕಾಣುತ್ತಿಲ್ಲ. ನಮ್ಮದು ಒಂಭತ್ತು ಜನರ ಗುಂಪು ಇತ್ತು. ಇದರಲ್ಲಿ ಮೂರ್ನಾಲ್ಕು ಜನರು ಇಲ್ಲೇ ಇದ್ದಾರೆ. ಉಳಿದವರು ಕಾಣುತ್ತಿಲ್ಲ” ಎಂದು ಆತಂಕ ವ್ಯಕ್ತಪಡಿಸಿದ್ದರು.
ಭಯಪಡುವ ಅಗತ್ಯವಿಲ್ಲ ಎಂದ ಡಿಸಿ : ಘಟನೆ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ”ಇಂದು ಬೆಳಗ್ಗೆ ಕಾಲ್ತುಳಿತ ಆಗಿದೆ ಅಂತಾ ತಿಳಿಯಿತು. ಬೆಳಗಾವಿ ಜಿಲ್ಲೆಯ 30 ಜನರ ತಂಡ ಪ್ರಯಾಗ್ರಾಜ್ಗೆ ಹೋಗಿತ್ತು. ಈಗ ಒಬ್ಬರಿಗೊಬ್ಬರ ಸಂಪರ್ಕ ಸಿಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ನಡೆದು ಈಗ ಆರೇಳು ತಾಸು ಅಷ್ಟೇ ಆಗಿದೆ. ಅಲ್ಲಿ ಸೇರಿರುವ ಜನರ ಸಂಖ್ಯೆ ಹೆಚ್ಚಾಗಿದೆ. ಅಮಾವಾಸ್ಯೆ ಸ್ನಾನಕ್ಕೆಂದು 8 ಕೋಟಿಗೂ ಅಧಿಕ ಜನ ಸೇರುವ ಸಂದರ್ಭ ಸೃಷ್ಟಿಯಾಗಿದೆ. ಅದರಿಂದ ಯಾತ್ರಾರ್ಥಿಗಳ ಪೋಷಕರು ಯಾವುದೇ ರೀತಿ ಭಯಪಡುವ ಅಗತ್ಯತೆ ಇಲ್ಲ” ಎಂದು ತಿಳಿಸಿದರು.
Laxmi News 24×7