ಬೆಳಗಾವಿ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳು ಮುಂದುವರೆದಿದ್ದು, ಬೆಳಗಾವಿಗೂ ತಟ್ಟಿದೆ. ಒಂದು ತಿಂಗಳ ಹಸುಗೂಸು, ಬಾಣಂತಿ ಸೇರಿ ಮನೆಯವರನ್ನೆಲ್ಲಾ ಹೊರಗೆ ಹಾಕಿದ್ದಲ್ಲದೇ, ವಾಸಿಸುವ ಮನೆ ಗೋಡೆ ಮೇಲೆ ಹರಾಜಿದೆ ಎಂದು ಬರೆದಿರುವುದಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆಯಿಂದ ಕಿರುಕುಳಕ್ಕೊಳಗಾದ ಕುಟುಂಬ ಅಳಲು ತೋಡಿಕೊಂಡಿದೆ.
ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಗಣಪತಿ ರಾಮಚಂದ್ರ ಲೋಹಾರ್ ಎಂಬುವರ ಮನೆ ಜಪ್ತಿ ಪಡಿಸಿಕೊಳ್ಳಲಾಗಿದೆ. ಬಾಣಂತಿ, ಹಸುಗೂಸು ಅಂತಾನೂ ನೋಡದೇ ಪಾತ್ರೆ, ಬಟ್ಟೆಗಳನ್ನು ಹೊರಗೆ ಹಾಕಿ ಮನೆಗೆ ಬೀಗ ಜಡಿದಿದ್ದಾರೆ.
ಕಳೆದ 5 ವರ್ಷಗಳ ಹಿಂದೆ ಫೈನಾನ್ಸ್ನಲ್ಲಿ 5 ಲಕ್ಷ ರೂ. ಸಾಲ ಪಡೆದಿದ್ದೆ. ಬಳಿಕ ಮೂರು ವರ್ಷಗಳ ಕಾಲ ನಿರಂತರ ಕಂತು ತುಂಬಿದ್ದೆ. ಆದರೆ, ಅನಾರೋಗ್ಯ ಮತ್ತು ಮಗಳ ಹೆರಿಗೆ ಹಿನ್ನೆಲೆಯಲ್ಲಿ ಕಳೆದ 6 ತಿಂಗಳಿಂದ ಕಂತು ತುಂಬಿಲ್ಲ. ಹಾಗಾಗಿ, ನಿನ್ನೆ ಏಕಾಏಕಿ ಪೊಲೀಸರು ಹಾಗೂ ವಕೀಲರ ಸಮ್ಮುಖದಲ್ಲೆ ಮನೆಯನ್ನು ಫೈನಾನ್ಸ್ ಸಿಬ್ಬಂದಿ ಜಪ್ತಿ ಪಡಿಸಿಕೊಂಡಿದ್ದಾರೆ. ಮನೆಯಲ್ಲಿದ್ದ ಒಂದು ತಿಂಗಳ ಬಾಣಂತಿ ಸದ್ಯ ಬೀದಿಪಾಲಾಗಿದ್ದಾರೆ. ಮನೆಯ ಅಕ್ಕದ ಪುಟ್ಟ ಶೆಡ್ನಲ್ಲಿಯೇ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅನಾರೋಗ್ಯ, ಮನೆಯ ಪರಿಸ್ಥಿತಿ ನೆನದು ಲೋಹಾರ್ ಕುಟುಂಬ ಕಣ್ಣಿರು ಹಾಕುತ್ತಿದೆ.

ಮೂರು ವರ್ಷ ಕಟ್ಟಿರುವ ಕಂತಿನ ಹಣದ ಸ್ಟೇಟಮೆಂಟ್ ಕೊಡಲು ಫೈನಾನ್ಸ್ ಸಿಬ್ಬಂದಿ ನಿರಾಕರಿಸುತ್ತಿದ್ದಾರೆ. ಸದ್ಯ 7.5 ಲಕ್ಷ ರೂಪಾಯಿ ಒಂದೇ ಹಂತದಲ್ಲಿ ಕಟ್ಟುವಂತೆ ಫೈನಾನ್ಸ್ ಸಿಬ್ಬಂದಿ ಪೀಡಿಸುತ್ತಿದ್ದಾರೆ. ಈಗಾಗಲೇ ಮೂರು ವರ್ಷ ಕಂತು ತುಂಬಿದರೂ, ಈಗ ಮತ್ತೆ 7.5 ಲಕ್ಷ ರೂ. ನಾವು ಎಲ್ಲಿಂದ ತುಂಬುವುದು ಅಂತಾ ಲೋಹಾರ್ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.
Laxmi News 24×7