ಹಾವೇರಿ: ಬಹುತೇಕ ಹೆಣ್ಣುದೇವರಿಗೆ ಭಕ್ತರು ನೈವೇದ್ಯ ರೂಪದಲ್ಲಿ ಕುರಿ, ಕೋಳಿಗಳನ್ನು ಅರ್ಪಿಸುವುದುಂಟು. ಇನ್ನು ಕೆಲವೆಡೆ ದುರ್ಗಾದೇವಿಗೆ ಕೋಣ ಬಲಿ ನೀಡುವ ಸಂಪ್ರದಾಯವೂ ಇದೆ. ಇತ್ತೀಚೆಗೆ ಪ್ರಾಣಿ ದಯಾ ಸಂಘದ ಹೋರಾಟದ ಫಲವಾಗಿ ಪ್ರಾಣಿಬಲಿ ಕಡಿಮೆಯಾಗಿದೆ. ಇದೇ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಬಂಕಾಪುರದ ದೇವಿ ಜಾತ್ರೆ ವಿಶಿಷ್ಟವಾಗಿದೆ.
ಈ ಜಾತ್ರೆಯಲ್ಲಿ ಯಾವುದೇ ಪ್ರಾಣಿಬಲಿ ನಡೆಯುವುದಿಲ್ಲ. ಭಕ್ತರು ದೇವಿಗೆ ಕುರಿ, ಕೋಳಿ, ಕೋಣ ಸೇರಿದಂತೆ ಯಾವುದೇ ಪ್ರಾಣಿಯ ರಕ್ತದ ನೈವೇದ್ಯ ಕೊಡುವುದಿಲ್ಲ. ಪ್ರಾಣಿ ಬಲಿ ಬದಲು ಸಿಹಿ ಪದಾರ್ಥವನ್ನು ಅರ್ಪಿಸಲಾಗುತ್ತದೆ. ಮಾದಲಿ, ಗೋದಿಹುಗ್ಗಿ, ಬೂಂದಿ ಸೇರಿದಂತೆ ಸಿಹಿ ಪದಾರ್ಥಗಳು ಹಾಗೂ ಹಣ್ಣುಕಾಯಿ ನೈವೇದ್ಯ ಕೊಟ್ಟರೆ ದುರ್ಗಾದೇವಿ ಪ್ರಸನ್ನಳಾಗುತ್ತಾಳೆ ಎನ್ನುತ್ತಾರೆ ಭಕ್ತರು.1987ರಿಂದಲೂ ಇಲ್ಲಿ ಜಾತ್ರೋತ್ಸವ ಆಯೋಜಿಸಿಕೊಂಡು ಬರಲಾಗುತ್ತಿದೆ. ಜಾತ್ರೆಯ ಪ್ರಯುಕ್ತ ಮೂರು ದಿನಗಳವರೆಗೆ ಬಯಲು ಜಂಗಿ ಕುಸ್ತಿ ಪಂದ್ಯಾವಳಿ ನಡೆಸಲಾಗುತ್ತದೆ. ರಾಜ್ಯ, ನೆರೆ ರಾಜ್ಯಗಳಿಂದ ಫೈಲ್ವಾನರು ಆಗಮಿಸಿ, ಕುಸ್ತಿಯಲ್ಲಿ ಪಾಲ್ಗೊಳ್ಳುತ್ತಾರೆ.
Laxmi News 24×7