ಬೆಂಗಳೂರು: ರೂಲಿಂಗ್ ನೀಡಿದರೂ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ. ರವಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವ ಬಗ್ಗೆ ಆಕ್ಷೇಪಿಸಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಗೃಹ ಸಚಿವ ಜಿ. ಪರಮೇಶ್ವರ್ಗೆ ಪತ್ರ ಬರೆದಿದ್ದಾರೆ.
ಬೆಳಗಾವಿ ವಿಧಾನ ಪರಿಷತ್ ಕಲಾಪದಲ್ಲಿನ ಅವಾಚ್ಯ ಶಬ್ದ ಬಳಕೆ ಆರೋಪದ ಘಟನೆ ಕುರಿತು ಸಿಐಡಿ ತನಿಖೆ ಬಗ್ಗೆ ಪತ್ರ ಬರೆದಿರುವ ಸಭಾಪತಿ, ರೂಲಿಂಗ್ ನೀಡಿದ್ದರೂ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ ಕ್ರಮ ಪ್ರಶ್ನಿಸಿದ್ದಾರೆ. ಸಭಾಪತಿ ಅಧಿಕಾರಕ್ಕೆ ಚ್ಯುತಿ ಬರುವಂತೆ ಕಾರ್ಯಾಂಗ ವರ್ತಿಸಬಾರದು. ಸದನದ ಹಾಗೂ ಸಭಾಪತಿಗಳ ಸಾರ್ವಭೌಮತ್ವವನ್ನು ಬಲಿ ಕೊಡಬಾರದು. ಇಂತಹ ತನಿಖೆ ಅಗತ್ಯತೆ ಬಗ್ಗೆ ಪ್ರಶ್ನಿಸಿ ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ.
ಪ್ರಕರಣವನ್ನು ಸಿಐಡಿಗೆ ಕೊಟ್ಟಿರುವುದು ತಿಳಿದುಬಂದಿದೆ. ನೀವು ಯಾವ ವಿಷಯವನ್ನು ಸಿಐಡಿಗೆ ಕೊಟ್ಟಿರಬಹುದು ಎಂಬ ಬಗ್ಗೆ ನಮಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಸದನದಲ್ಲಿ ನಡೆದಂತಹ ಘಟನೆಯನ್ನು ಚರ್ಚಿಸುವುದು, ಮುಕ್ತಾಯ ಮಾಡುವುದು ಮತ್ತು ಅದರ ಬಗ್ಗೆ ತೀರ್ಮಾನಿಸುವುದರಲ್ಲಿ ಸದನಕ್ಕೆ ಸಾರ್ವಭೌಮತ್ವ ಅಧಿಕಾರವಿರುತ್ತದೆ ಎಂದಿದ್ದಾರೆ.
19.12.2024 ರಂದು ಬೆಳಗಾವಿ ಸುವರ್ಣ ವಿಧಾನಸೌಧದ ವಿಧಾನ ಪರಿಷತ್ತಿನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಭಾರತದ ಸಂವಿಧಾನ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯ ವಿಧಾನ ಹಾಗೂ ನಡವಳಿಕೆಯ ನಿಯಮಗಳು, ಲೋಕಸಭೆ ಮತ್ತು ರಾಜ್ಯ ಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳು, ಕೌಲ್ ಅಂಡ್ ಶಕ್ದರ್ ಅವರ ಪ್ರಾಕ್ಟಿಸ್ ಆಂಡ್ ಪ್ರೊಸಿಜರ್ ಆಫ್ ಪಾರ್ಲಿಮೆಂಟ್ ಮತ್ತು ಸುಭಾಷ್ ಕಶ್ಯಪ್ ಅವರ ಪಾರ್ಲಿಮೆಂಟರಿ ಪ್ರೊಸಿಜರ್ಗಳನ್ನು ಪರಾಮರ್ಶಿಸಿಕೊಂಡು ಪೀಠದಿಂದ ತೀರ್ಪು ನೀಡಲಾಗಿದೆ ಎಂದು ಸಭಾಪತಿಗಳು ಉಲ್ಲೇಖಿಸಿದ್ದಾರೆ.
ಸಾಂವಿಧಾನಿಕ ಹುದ್ದೆಯಾಗಿರುವ ಸಭಾಪತಿ ಅವರಿಗೆ ಸಂಸದೀಯ ಪದ್ಧತಿ ಮತ್ತು ಪ್ರಕ್ರಿಯೆಯಲ್ಲಿ ಸಾರ್ವಭೌಮತ್ವ ಅಧಿಕಾರ ಇದೆ. ಕಲಾಪ ನಡೆಯುತ್ತಿರುವಾಗ ಸದನದಲ್ಲಿ ಅವ್ಯವಸ್ಥಿತ ನಡತೆಗಾಗಿ ಅಥವಾ ಇತರೆ ನಿಂದನೆಗಳಿಗಾಗಿ ಅದರ ಸದಸ್ಯರನ್ನು ಶಿಕ್ಷಿಸುವ ಅಧಿಕಾರ ಸದನಕ್ಕೆ ಇರುತ್ತದೆ. ಈ ಪ್ರಕಾರದಲ್ಲಿ ಈವರೆಗೂ ಪಾಲಿಸಿಕೊಂಡು ಬಂದಿರುವ ಸತ್ಸಂಪ್ರದಾಯಗಳು ಮತ್ತು ಸದನದ ಆವರಣದ ಒಳಗೆ ಶಿಸ್ತು ಸಂರಕ್ಷಿಸುವುದು, ವ್ಯವಹರಣೆಗಳನ್ನು ನಿಯಂತ್ರಿಸುವ ಅಧಿಕಾರ ಸಭಾಪತಿಯವರಿಗೆ ಪ್ರದತ್ತವಾಗಿದ್ದು, ಅವರ ತೀರ್ಪು ಅಂತಿಮವಾಗಿರುತ್ತದೆ ಎಂದು ತಿಳಿಸಿದ್ದಾರೆ.