ಹಾವೇರಿ: ಉತ್ತರ ಕರ್ನಾಟಕದ ಪ್ರಮುಖ ಜಾತ್ರೆ ಮತ್ತು ಆರಂಭಿಕ ಜಾತ್ರೆ ಎಂದು ಕರೆಸಿಕೊಳ್ಳುವ ಹಾವೇರಿ ಹುಕ್ಕೇರಿಮಠದ ಜಾತ್ರೆ ಭಾನುವಾರದಿಂದ ಆರಂಭವಾಗಿದೆ. ಜಾತ್ರೆಯ ಎರಡನೇಯ ದಿನವಾದ ಇಂದು ಜಾನುವಾರು ಜಾತ್ರೆಗೆ ಚಾಲನೆ ಸಿಕ್ಕಿತು.
ರಾಜ್ಯದಲ್ಲಿಯೇ ದೊಡ್ಡ ಜಾನುವಾರು ಮಾರುಕಟ್ಟೆಯಾಗಿರುವ ಹಾವೇರಿಯಲ್ಲಿ ವರ್ಷಪೂರ್ತಿ ಜಾನುವಾರುಗಳು ಸಿಗುತ್ತವೆ. ಕಳೆದ 54 ವರ್ಷಗಳಿಂದ ಹುಕ್ಕೇರಿಮಠ ಜಾನುವಾರು ಜಾತ್ರೆ ಆಯೋಜಿಸುತ್ತಾ ಬರುತ್ತಿದೆ. ಸದ್ಯ ಚರ್ಮಗಂಟು ರೋಗ ಕಾಣಿಸಿಕೊಂಡ ಹಿನ್ನೆಲೆ ಜಾನುವಾರುಗಳಿಗೆ ಚರ್ಮಗಂಟು ರೋಗ ಲಸಿಕೆ ಹಾಕುವ ಮೂಲಕ ಜಾನುವಾರು ಜಾತ್ರೆಗೆ ಚಾಲನೆ ನೀಡಲಾಯಿತು. ಹುಕ್ಕೇರಿಮಠದ ಸದಾಶಿವಶ್ರೀಗಳು ಜಾನುವಾರು ಜಾತ್ರೆಗೆ ಚಾಲನೆ ನೀಡಿದರು.
ಪಶು ವೈದ್ಯಾಧಿಕಾರಿಗಳು ಜಾನುವಾರುಗಳಿಗೆ ಚರ್ಮಗಂಟು ರೋಗ ಸೇರಿದಂತೆ ವಿವಿಧ ರೋಗಗಳು ಕಾಡದಂತೆ ಲಸಿಕೆ ಹಾಕಿದರು. ನೂರಾರು ರೈತರು ತಮ್ಮ ಜಾನುವಾರುಗಳಿಗೆ ಚರ್ಮಗಂಟು ರೋಗ ನಿರೋಧಕ ಲಸಿಕೆ ಹಾಕಿಸಿದರು. ಮಠ ಮತ್ತು ಪಶುಸಂಗೋಪನಾ ಇಲಾಖೆಯ ಈ ಕಾರ್ಯಕ್ಕೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದರು.ಹಾವೇರಿ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ 2000ಕ್ಕೂ ಅಧಿಕ ಜಾನುವಾರುಗಳು ಚರ್ಮಗಂಟು ರೋಗದಿಂದ ಸಾವನ್ನಪ್ಪಿದ್ದವು. ರೈತರು ತಮ್ಮ ಎತ್ತುಗಳನ್ನು ರಕ್ಷಿಸಿಕೊಳ್ಳಲು ಪರದಾಡಿದ್ದರು. ಹೀಗಾಗಿ ಹುಕ್ಕೇರಿಮಠದ ಜಾತ್ರೆಯಲ್ಲಿ ಲಸಿಕೆ ಹಾಕುವ ಕಾರ್ಯವನ್ನು ಮಾಡಲಾಯಿತು. ಚರ್ಮಗಂಟು ರೋಗ ಹಿನ್ನೆಲೆ ಎತ್ತು ಮತ್ತು ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಲಾಗುತ್ತಿದೆ. ಮಠಗಳು ಈ ರೀತಿ ಜಾಗೃತಿ ಮೂಡಿಸಲು ಮುಂದಾದರೆ ರೋಗ ನಿಯಂತ್ರಣ ಮಾಡಬಹುದು. ಈ ನಿಟ್ಟಿನಲ್ಲಿ ಹುಕ್ಕೇರಿಮಠದ ಕಾರ್ಯ ಶ್ಲಾಘನೀಯ ಎಂದು ಅಧಿಕಾರಿಗಳು ತಿಳಿಸಿದರು.
Laxmi News 24×7