ಗದಗ, ಡಿಸೆಂಬರ್ 26: ಮನೆಯಲ್ಲಿ ಪೂಜೆ ಮಾಡುವ ಯಲ್ಲಮ್ಮ, ಹುಲಿಗೆಮ್ಮ, ಲಕ್ಷ್ಮೀ ದೇವರುಗಳನ್ನೇ ಆ ಕುಟುಂಬದವರು ಹೊರಗೆ ಹಾಕಿದ್ದಾರೆ. ಬದಲಿಗೆ ಬುದ್ಧ, ಬಸವ, ಅಂಬೇಡ್ಕರ್ ಅವರೇ ನಮ್ಮ ಪಾಲಿಗೆ ದೇವರು ಎಂದು ಸ್ಮರಣೆ ಶುರು ಮಾಡಿದ್ದಾರೆ! ಗದಗ ಬೆಟಗೇರಿ ನಗರದ ಅಂಬೇಡ್ಕರ್ ಕಾಲೋನಿ ನಿವಾಸಿ ಹಾಗೂ ಹೋರಾಟಗಾರ ಷರೀಫ್ ಬಿಳಿಯಲಿ ಮನೆಯಲ್ಲಿ ಕುಟುಂಬಸ್ಥರು ‘‘ಬುದ್ಧಂ ಶರಣಂ ಗಚ್ಛಾಮಿ’’ ಮಂತ್ರ ಪಠಣದೊಂದಿಗೆ ಕಠೋರ ನಿರ್ಧಾರ ಮಾಡಿದ್ದಾರೆ.

ನಮ್ಮ ತಾಯಿ ದೇವದಾಸಿಯಾಗಿದ್ದರು. ಅನಾರೋಗ್ಯದಲ್ಲಿದ್ದಾಗ ಯಾವ ದೇವರೂ ಬದುಕಿಸಲಿಲ್ಲ. ದೇವರು ಎಲ್ಲಿದ್ದಾನೆ ಎಂದು ಕುಟುಂಸ್ಥರು ಪ್ರಶ್ನೆ ಮಾಡಿದ್ದಾರೆ.
ಈ ಕುಟುಂಬದವರು ಹಲವು ವರ್ಷಗಳಿಂದ ಮನೆಯಲ್ಲಿ ಯಲ್ಲಮ್ಮ, ಹುಲಗೆಮ್ಮ, ಲಕ್ಷ್ಮೀ ಸೇರಿ ಹಲವು ದೇವತೆಗಳ ಪೂಜೆ ಮಾಡುತ್ತಿದ್ದರು. ಆದರೆ, ಈಗ ಆ ದೇವರುಗಳ ಫೋಟೊವನ್ನು ಮನೆಯಿಂದ ಹೊರ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶರೀಫ್ ಬಿಳಿಯಲಿ ಹಾಗೂ ಅವರ ಪತ್ನಿ ಗಾಯತ್ರಿ ಸೇರಿ ಈ ಕಠೋರ ನಿರ್ಧಾರ ಮಾಡಿದ್ದಾರೆ. ಮನೆಯಲ್ಲಿ ಷರೀಫ್ ಅವರ ತಾಯಿಯ ಕಾಲದಿಂದಲೂ ಪೂಜಿಸಿಕೊಂಡು ಬರುತ್ತಿದ್ದರು.
ಶರೀಫ್ ತಾಯಿ ದೇವದಾಸಿಯಾಗಿದ್ದರು. ಯಲ್ಲಮ್ಮ, ಹುಲಗೆಮ್ಮ ದೇವಿಯನ್ನು ಆರಾಧಿಸುತ್ತಿದ್ದರು. ಆದರೆ, ಆನಾರೋಗ್ಯದಿಂದ ತಾಯಿ ತೀರಿಕೊಂಡಿದ್ದಾರೆ. ದೇವರು ಇರುವುದು ಹೌದಾದರೆ, ಯಾಕೆ ಬದುಕಿಸಲಿಲ್ಲ? ದೇವರೇ ಇಲ್ಲ? ಇದೊಂದು ಪುರೋಹಿತಶಾಹಿಗಳ ಸಂಚು ಎಂಬುದು ಈ ಕುಟುಂಬದವರ ವಾದ.ಹೀಗಾಗಿ ಹಿಂದೂ ಪದ್ಧತಿಯ ಪೂಜೆಯನ್ನು ತಿರಸ್ಕಾರ ಮಾಡಿ ಹಿಂದೂ ದೇವರುಗಳಾದ ಯಲ್ಲಮ್ಮ, ಹುಲಿಗೆಮ್ಮ, ಲಕ್ಷ್ಮೀ ಫೊಟೊಗಳನ್ನು ಮತ್ತು ಕಾಯಿ, ಕರ್ಪೂರ ಹಾಗೂ ಪೂಜೆ ವಸ್ತುಗಳನ್ನು ಹೊರಗೆ ಹಾಕಿದ್ದಾರೆ. ಬದಲಾಗಿ ಬುದ್ಧ, ಬಸವ, ಅಂಬೇಡ್ಕರ್ಗಳ ಮೂರ್ತಿಗಳನ್ನು ಮನೆಗೆ ತಂದಿದ್ದಾರೆ. ದೇವರುಗಳಿದ್ದ ಜಾಗದಲ್ಲಿ ಅವುಗಳನ್ನ ಕೂರಿಸಿ ಸ್ಮರಣೆ ಮಾಡಲು ಮುಂದಾಗಿದ್ದಾರೆ.
Laxmi News 24×7