ಬೆಳಗಾವಿ: ನೂರು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮುಖ್ಯ ದ್ವಾರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಈಗ ಶತಮಾನೋತ್ಸವಕ್ಕೆ ಬೆಳಕಿನ ಸ್ವರ್ಗವೇ ಧರೆಗೆ ಇಳಿದಿದೆ. ಈ ದೃಶ್ಯ ವೈಭವ ಕಣ್ತುಂಬಿಕೊಂಡು ಜನ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
1924 ಡಿ.26, 27ರಂದು ಬೆಳಗಾವಿ ಟಿಳಕವಾಡಿಯಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ 39ನೇ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಆ ವೇಳೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ವಿಜಯನಗರ ಸಾಮ್ರಾಜ್ಯ ಕುರುಹುವಿಗಾಗಿ “ವಿಜಯನಗರ” ಎಂದು ನಾಮಕರಣ ಮಾಡಲಾಗಿತ್ತು. ಅಲ್ಲೇ ಒಂದು ಬಾವಿಯನ್ನು ತೋಡಿ ಅದಕ್ಕೆ “ಪಂಪಾ ಸರೋವರ” ಎಂದು ಕರೆಯಲಾಗಿತ್ತು. ಇನ್ನು ವಿರೂಪಾಕ್ಷ ಗೋಪುರ ನಿರ್ಮಿಸಲಾಗಿತ್ತು. ಈ ಗೋಪುರವನ್ನು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ಈಗ ಅದನ್ನೇ ಪ್ರೇರಣೆಯಾಗಿಟ್ಟುಕೊಂಡ ರಾಜ್ಯ ಸರ್ಕಾರ, ಇಡೀ ಬೆಳಗಾವಿಯನ್ನು ಮಿರ ಮಿರ ಮಿಂಚುವಂತೆ ಮಾಡಿದೆ.
ಬೆಳಗಾವಿ ನಗರದ 104 ಕಿ.ಮೀ., 90 ವೃತ್ತಗಳಲ್ಲಿ ಸುಮಾರು 2 ಲಕ್ಷ ಎಲ್ಇಡಿ ಬಲ್ಬ್ಗಳು ಸೇರಿ ಅತ್ಯಾಧುನಿಕ ಆಕರ್ಷಕ ದೀಪಗಳಿಂದ ಅಲಂಕಾರಗೊಳಿಸಲಾಗಿದೆ. ಬರೀ ದೀಪಾಲಂಕಾರಕ್ಕೆ ಅಂದಾಜು 8 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ವ್ಯಯಿಸಿದೆ. ಬುಧವಾರ ಮಧ್ಯರಾತ್ರಿವರೆಗೂ ಜನ ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡರು.
ಚಿಕ್ಕ ಮಕ್ಕಳು, ವೃದ್ಧರು ಆದಿಯಾಗಿ ಕುಟುಂಬ ಸಮೇತರಾಗಿ ಇಡೀ ಕುಂದಾನಗರಿಯನ್ನು ಪ್ರದಕ್ಷಿಣೆ ಹಾಕಿದರು. ರಾಣಿ ಚನ್ನಮ್ಮ ವೃತ್ತದಲ್ಲಿ ಮಧ್ಯರಾತ್ರಿ 12 ಗಂಟೆವರೆಗೂ ಜನ ಜಮಾಯಿಸಿದ್ದರು. ಬೆಳಕಿನ ಚಿತ್ತಾರದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.