ಹಾನಗಲ್: ತಾಲ್ಲೂಕಿನ ಯಳ್ಳೂರ-ಬಸಾಪುರ ಗ್ರಾಮೀಣ ರಸ್ತೆ ಹದಗೆಟ್ಟಿದೆ. ಮೊಣಕಾಲು ಮಟ್ಟದ ತಗ್ಗುಗಳು ಸೃಷ್ಟಿಯಾಗಿದ್ದು ಸಾರಿಗೆ ಬಸ್ ಸಂಚಾರ ಕೂಡ ಅಸಾಧ್ಯವಾಗಿದೆ. ಈ ಭಾಗದ ಜನರು ಮತ್ತು ಶಾಲೆ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ ಉಂಟಾಗಿದೆ.
ಮಳೆಗಾಲದ ಆರಂಭದಿಂದಲೇ ರಸ್ತೆ ಸಂಚಾರ ದುಸ್ತರವಾಗುತ್ತಿದೆ.
ಈಚೆಗಂತೂ ಹೆಜ್ಜೆಗೊಂದು ಗುಂಡಿ ಬಾಯ್ತೆರೆದುಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಈ ರಸ್ತೆಯಲ್ಲಿ ಹಾನಗಲ್ ಸಾರಿಗೆ ಘಟಕದ ಬಸ್ ಸಂಚಾರ ಬಂದ್ ಮಾಡಿ ಒಂದು ತಿಂಗಳು ಗತಿಸಿದೆ.
ಮಹರಾಜಪೇಟೆ ಗ್ರಾಮದ ಪ್ರೌಢಶಾಲೆಗೆ ಮತ್ತು ಹಾನಗಲ್ನಲ್ಲಿ ಇಂಗ್ಲಿಷ್ ಮಾಧ್ಯಮದ ಪ್ರಾಥಮಿಕ ಶಾಲೆ, ಕಾಲೇಜುಗಳಿಗೆ ಬಸಾಪುರ, ಯಳ್ಳೂರ ಭಾಗದ ಸುಮಾರು 100 ವಿದ್ಯಾರ್ಥಿಗಳು ನಿತ್ಯ ಸಂಚರಿಸುತ್ತಾರೆ. ಬಸ್ ಸಂಚಾರ ಸ್ಥಗಿತದಿಂದ ವಿದ್ಯಾರ್ಥಿಗಳು ಮುಖ್ಯ ರಸ್ತೆಯ ತನಕ ನಡೆದುಕೊಂಡು ಹೋಗಬೇಕಿದೆ.
ಯಳ್ಳೂರ ಗ್ರಾಮದ ವಿದ್ಯಾರ್ಥಿಗಳು 3 ಕಿ.ಮೀ ನಡೆದುಕೊಂಡು ಹೋಗಿ ಮುಖ್ಯರಸ್ತೆ ತಲುಪಿ ಅಲ್ಲಿಂದ ಬಸ್ ಹಿಡಿದು ಶಾಲೆ, ಕಾಲೇಜಿಗೆ ತೆರಳಬೇಕಾಗಿದೆ. ಬಸಾಪುರ ಮತ್ತು ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು 5 ಕಿ.ಮೀ ನಡೆದು ಹೋಗಬೇಕಿದೆ. ಇದೇ ಮಾರ್ಗವಾಗಿ ಬೊಮ್ಮನಹಳ್ಳಿ ಹೊಬಳಿಯ ಸಾಕಷ್ಟು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ದುರಸ್ತಿಗಾಗಿ ಸಂಬಂಧಿತ ಇಲಾಖೆಗೆ ಗ್ರಾಮಸ್ಥರ ಹಲವು ಬೇಡಿಕೆಗಳು ಸಲ್ಲಿಕೆಯಾಗಿವೆ. ಆದರೆ ಪ್ರಯೋಜನವಾಗಿಲ್ಲ.