ಹಾವೇರಿ: ತನ್ನ ಪತ್ನಿಯನ್ನು ಮನೆಗೆ ಕಳುಹಿಸಲಿಲ್ಲವೆಂಬ ಕಾರಣಕ್ಕೆ ಮಾವನ ಮೇಲೆ ಸಿಟ್ಟಾದ ಅಳಿಯನೊಬ್ಬ, ಮಾವನ ಜಮೀನಿನಲ್ಲಿ ಬೆಳೆದಿದ್ದ 106 ಅಡಿಕೆ ಗಿಡಗಳನ್ನು ಕಡಿದು ಹಾಕಿ ನಾಶಪಡಿಸಿರುವ ಬಗ್ಗೆ ಆಡೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.‘ಹಾನಗಲ್ ತಾಲ್ಲೂಕಿನ ಬಸಾಪುರ ಗ್ರಾಮದ ದೇವೇಂದ್ರಪ್ಪ ಫಕ್ಕೀರಪ್ಪ ಗಾಣಿಗೇರ (55) ಅವರು ದೂರು ನೀಡಿದ್ದಾರೆ.
ಅವರ ಅಳಿಯನಾದ ಬಸವರಾಜ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ದೂರುದಾರ ದೇವೇಂದ್ರಪ್ಪ, ತಮ್ಮ ಮಗಳನ್ನು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಬಸವರಾಜನಿಗೆ 10 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದರು. ಮದ್ಯ ವ್ಯಸನಿಯಾಗಿದ್ದ ಆರೋಪಿ ಬಸವರಾಜ, ಪತ್ನಿ ಜೊತೆ ನಿತ್ಯವೂ ಜಗಳ ಮಾಡಲಾರಂಭಿಸಿದ್ದ. ತವರು ಮನೆಯವರು ಎಷ್ಟೇ ಎಚ್ಚರಿಕೆ ನೀಡಿದರೂ ಬಸವರಾಜ ಸುಧಾರಿಸಿರಲಿಲ್ಲ. ಇದರಿಂದ ಬೇಸತ್ತ ದೇವೇಂದ್ರಪ್ಪ ಅವರ ಮಗಳು, ಗಂಡನ ಮನೆ ಬಿಟ್ಟು ಬಂದು ತವರು ಮನೆಯಲ್ಲಿ ಉಳಿದುಕೊಂಡಿದ್ದರು’ ಎಂದರು.
‘ದೇವೇಂದ್ರಪ್ಪ ಅವರ ಮಗಳು ಮೂರು ತಿಂಗಳಿನಿಂದ ಗಂಡನ ಮನೆಗೆ ಹೋಗಿರಲಿಲ್ಲ. ಪತ್ನಿಯನ್ನು ಮನೆಗೆ ಕಳುಹಿಸುವಂತೆ ಬಸವರಾಜ ಹಲವು ಬಾರಿ ಒತ್ತಾಯಿಸಿದ್ದ. ಆದರೆ, ಮದ್ಯ ಕುಡಿಯುವುದನ್ನು ಬಿಡುವಂತೆ ತವರು ಮನೆಯವರು ಹೇಳಿದ್ದರು. ಆದರೆ, ಬಸವರಾಜ ಮದ್ಯ ಬಿಟ್ಟಿರಲಿಲ್ಲ. ಹೀಗಾಗಿ, ಮಗಳನ್ನು ಕಳುಹಿಸುವುದಿಲ್ಲವೆಂದು ದೇವೇಂದ್ರಪ್ಪ ಅವರು ಹೇಳಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.