ಬೆಳಗಾವಿ: ‘ಇಂದಿನ ಮಕ್ಕಳು ಮತ್ತು ಯುವಜನರು ವಿದ್ಯಾರ್ಥಿ ಹಂತದಿಂದಲೇ ಕ್ರೀಡಾ ಸಾಮರ್ಥ್ಯ ಬೆಳೆಸಿಕೊಳ್ಳಬೇಕು’ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನ ನಡೆಯಲಿರುವ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ನರೇಂದ್ರ ಮೋದಿ ಪ್ರಧಾನಿಯಾದ ನಂತರ, ದೇಶದಲ್ಲಿ ಕ್ರೀಡಾ ರಂಗಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಅವಕಾಶ ಕಲ್ಪಿಸಲಾಗುತ್ತಿದೆ. ಕ್ರೀಡಾಪಟುಗಳಿಗೆ ಅಗತ್ಯ ಹಣಕಾಸಿನ ನೆರವು ಒದಗಿಸಲಾಗುತ್ತಿದೆ. ಇದರ ಸದ್ಬಳಕೆ ಮಾಡಿಕೊಂಡು, ಕ್ರೀಡಾಸಾಧನೆ ಮೆರೆಯಬೇಕು’ ಎಂದರು.
‘ಯುವಜನರು ಮೊಬೈಲ್ ಗೀಳಿನಿಂದ ಹೊರಬಂದು, ಆಟದ ಮೈದಾನಕ್ಕೆ ಇಳಿಯಬೇಕು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲೂ ಯಶಸ್ಸು ಕಾಣಬೇಕು’ ಎಂದು ಕರೆಕೊಟ್ಟರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಬಿ.ಶ್ರೀನಿವಾಸ, ‘ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದಲ್ಲಿ 17 ಕ್ರೀಡೆಗಳಿಗೆ ಸಂಬಂಧಿಸಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿವೆ’ ಎಂದರು.
ಮುಕುಂದ ಕಿಲ್ಲೇಕರ, ಜಿ.ಎನ್.ಪಾಟೀಲ, ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಆರ್.ಎಚ್.ಪೂಜಾರಿ ಇದ್ದರು. ವಿ.ಎಸ್.ಪಾಟೀಲ ಪ್ರತಿಜ್ಞಾವಿಧಿ ಬೋಧಿಸಿದಿರು.
ಜಿಲ್ಲೆಯ ವಿವಿಧ ತಾಲ್ಲೂಕುಗಳ ತಲಾ 14 ಪುರುಷ, ಮಹಿಳಾ ತಂಡಗಳಿದ್ದು, 1 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದರು.
ಮಳೆಯಿಂದ ತೊಡಕು
ಬುಧವಾರ ಆಗಾಗ ಸುರಿದ ಮಳೆಯಿಂದ ಕ್ರೀಡಾಕೂಟಕ್ಕೆ ತೊಡಕಾಯಿತು. ನಿಗದಿತ ಸಮಯಕ್ಕೆ ಹೊರಾಂಗಣ ಸ್ಪರ್ಧೆಗಳನ್ನು ನಡೆಸಲು ಸಂಘಟಕರು ಪರದಾಡಿದರು. ವರುಣ ಅಬ್ಬರಿಸುತ್ತಿದ್ದಂತೆ ಕ್ರೀಡಾಪಟುಗಳು ಆಶ್ರಯಕ್ಕಾಗಿ ಓಡಾಡುತ್ತಿರುವುದು ಕಂಡುಬಂತು. ಹಲವು ಕ್ರೀಡಾಪಟುಗಳು ಮಳೆ ಮಧ್ಯೆಯೂ ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಗಮನಸೆಳೆದರು.