ಹುಕ್ಕೇರಿ: ’24 ವರ್ಷದಲ್ಲಿ 17 ಶಾಖೆ ಹೊಂದಿ ₹3.25 ಕೋಟಿ ನಿವ್ವಳ ಲಾಭ ಹೊಂದಿ ಪ್ರಗತಿ ತೋರಿಸುತ್ತಿರುವ ಮಹಾವೀರ ಮಲ್ಟಿಪರಪಜ್ ಸೊಸೈಟಿಯು ಇತರೆ ಹಣಕಾಸು ಸಂಸ್ಥೆಗಳಿಗೆ ಮಾದರಿ’ ಎಂದು ಯರನಾಳ ಸಿದ್ಧಾರೂಢ ಮಠದ ಎಸ್.ರಮಾನಂದ ಸ್ವಾಮೀಜಿ ಹೇಳಿದರು.
ಸ್ಥಳೀಯ ಮಹಾವೀರ ಮಲ್ಟಿಪರಪಜ್ ಸೌಹಾರ್ದ ಸಹಕಾರ ಸಂಘದ 24ನೇ ವಾರ್ಷಿಕ ಸರ್ವಸಾಧಾರಣ ಸಭೆ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾವೀರ ನಿಲಜಗಿ ಮಾತನಾಡಿ, ‘ಸದಸ್ಯರ, ನಿರ್ದೇಶಕರ, ಉದ್ಯೋಗಿಗಳ ಸಹಕಾರ ಮತ್ತು ನಿಸ್ವಾರ್ಥ ಸೇವೆಯಿಂದ ಸಂಸ್ಥೆ ಬೆಳೆದಿದೆ. ಜಿಲ್ಲೆ ಸೇರಿದಂತೆ ಈಗಾಗಲೇ ಬಾಗಲಕೋಟೆ, ವಿಜಯಪುರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಶಾಖೆಗಳಿವೆ. ಮುಂದಿನ ದಿನಗಳಲ್ಲಿ ನಿಪ್ಪಾಣಿ, ಗೋಕಾಕ ಮತ್ತು ಉಗಾರ್ ಖುರ್ದ ದಲ್ಲಿ ಮೂರು ಶಾಖೆ ತೆರೆದು, ಕಾರ್ಯಕ್ಷೇತ್ರವನ್ನು ಶಿವಮೊಗ್ಗ, ಗದಗ ಮತ್ತು ಕಾರವಾರ ಜಿಲ್ಲೆಗೆ ವಿಸ್ತರಿಸಲಾಗುವುದು. ಸದಸ್ಯರಿಗೆ ಶೇ 25ರಷ್ಟು ಲಾಭಾಂಶ ಹಂಚಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು.
ಸಂಸ್ಥೆಯಿಂದ ಎಲ್.ಕೆ.ಜಿ ಯಿಂದ ಪದವಿವರೆಗೆ ಶಿಕ್ಷಣ ಕೊಡುತ್ತಿದ್ದು, ಪಟ್ಟಣದ ಬೈಪಾಸ್ ಬಳಿ ‘ಹೈ ಟೆಕ್ ಮಲ್ಟಿ ಸ್ಪೇಷಾಲಿಟಿ’ ಆಸ್ಪತ್ರೆ ನಿರ್ಮಿಸಲು ಕ್ರಮ ಜರುಗಿಸಲಾಗುತ್ತಿದೆ ಎಂದರು.
ಬೆಳ್ಳಿ ಮಹೋತ್ಸವ ಯೋಜನೆ: 25 ವರ್ಷದ ಸಂಭ್ರಮಾಚರಣೆ ಅಂಗವಾಗಿ ಠೇವುದಾರರಿಗೆ ಆರೋಗ್ಯ ಉಚಿತ ತಪಾಸಣೆ, ಆಯ್ದ ಸದಸ್ಯರಿಗೆ ತೀರ್ಥಕ್ಷೇತ್ರಗಳ ದರ್ಶನ, ಹಾಲಿ ಮತ್ತು ಮಾಜಿ ಸೈನಿಕರಿಗೆ ಸತ್ಕಾರ, ಹಿರಿಯ ಸಾಹಿತಿ, ನಾಗರಿಕರಿಗೆ, ಕೃಷಿ ಸಾಧಕರಿಗೆ ಮತ್ತು ಕ್ರೀಡಾ ಪಟುಗಳಿಗೆ ಸತ್ಕರಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಉಪಾಧ್ಯಕ್ಷ ರೋಹಿತ್ ಚೌಗಲಾ ತಿಳಿಸಿದರು.