ಮೈಸೂರು: ದಸರಾ ಮಹೋತ್ಸವದ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಈ ಬಾರಿಯೂ ಅಧಿಕಾರಿಗಳದ್ದೇ ‘ದರ್ಬಾರ್’ ನಡೆಯುತ್ತಿದೆ. ಉಪ ಸಮಿತಿಗಳಿಗೆ ಅಧಿಕಾರೇತರರ ನೇಮಕ, ಭಾಗಿದಾರರು ಅಥವಾ ಸಾರ್ವಜನಿಕರ ಸಲಹೆಗಳನ್ನು ಆಲಿಸಿ ಸಹಭಾಗಿತ್ವ ಪಡೆದುಕೊಳ್ಳುವ ಕಾರ್ಯ ಈವರೆಗೂ ನಡೆದಿಲ್ಲ.
ಮಹೋತ್ಸವಕ್ಕೆ ಅ.3ರಂದು ಚಾಲನೆ ದೊರೆಯಲಿದ್ದು, ಬಹಳ ದಿನಗಳೇನೂ ಉಳಿದಿಲ್ಲ. ಅದಕ್ಕೆ ಪೂರ್ವಭಾವಿಯಾಗಿ ಎಲ್ಲ ಕಾರ್ಯಕ್ರಮಗಳ ರೂಪರೇಷೆಯ ಸ್ಪಷ್ಟ ಚಿತ್ರಣ ದೊರೆಯಬೇಕು. ಹೊರ ಜಿಲ್ಲೆ, ಹೊರ ರಾಜ್ಯ ಮತ್ತು ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ನಡೆಯುವ ಉತ್ಸವವನ್ನು ರೂಪಿಸುವಲ್ಲಿ ಎಲ್ಲರನ್ನೂ ಒಳಗೊಳ್ಳುವ ಸಮಿತಿಗಳನ್ನು ರಚಿಸಲಾಗಿಲ್ಲ.
ಉಪ ಸಮಿತಿಗಳಿಗೆ ಉಪ ವಿಶೇಷಾಧಿಕಾರಿ, ಕಾರ್ಯಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಚಿಸಲಾಗಿದೆ. ಅವುಗಳಿಗೆ ಅಧಿಕಾರೇತರರನ್ನು ತ್ವರಿತವಾಗಿ ನೇಮಿಸಬೇಕು, ಆ ಮೂಲಕ ಅಧಿಕಾರಿಗಳ ದರ್ಬಾರ್ಗೆ ಕಡಿವಾಣ ಹಾಕಬೇಕು ಎಂಬ ಒತ್ತಾಯ ಜನಪ್ರತಿನಿಧಿಗಳಿಂದ ಕೇಳಿಬಂದಿತ್ತು. ಆದರೆ, ಈ ಬಾರಿಯೂ ನೇಮಕಾತಿಯಲ್ಲಿ ವಿಳಂಬ ಆಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ವಿಶೇಷವಾಗಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಆಕಾಂಕ್ಷಿಗಳಾಗಿದ್ದು, ಅವಕಾಶಕ್ಕಾಗಿ ಕಾಯುತ್ತಿದ್ದಾರೆ.