ಬೆಂಗಳೂರು, ಸೆಪ್ಟಂಬರ್ 11: ಓಣಂ ಹಬ್ಬದ ನೈರತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ವಿಶೇಷ ರೈಲು ಬಿಡಲಾಗಿದೆ. ಈ ವಿಶೇಷ ರೈಲು ಹುಬ್ಬಳ್ಳಿ ಜಂಕ್ಷನ್ನಿಂದ ನೆರೆಯ ಕೇರಳ ರಾಜ್ಯ ತಲುಪಲಿದೆ. ಈ ರೈಲಿನಿಂದ ಓಣಂಗೆ ತೆರಳುವವರಿಗೆ ಹಾಗೂ ರಾಜ್ಯದ ಕೆಲವು ಜಿಲ್ಲೆಗಳ ಮೂಲಕ ಹಾದು ಹೋಗುವುದರಿಂದ ಸ್ಥಳೀಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಈ ವಿಶೇಷ ರೈಲಿನ ವೇಳಾಪಟ್ಟಿ, ಮಾಹಿತಿ ಇಲ್ಲಿದೆ.
ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ-ಕೊಚುವೇಲಿ ನಡುವೆ ಸೆಪ್ಟೆಂಬರ್ 13ರಂದು ವಿಶೇಷ ರೈಲು ಕಾರ್ಯಾಚರಣೆ ಮಾಡಲಾಗುತ್ತದೆ. ಓಣಂ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಂಡು ಬರುತ್ತದೆ. ಹೀಗಾಗಿ ದಟ್ಟಣೆ ಸರಿದೂಗಿಸಲು ಹುಬ್ಬಳ್ಳಿ ಮತ್ತು ಕೇರಳದ ಕೊಚುವೇಲಿ ನಿಲ್ದಾಣಗಳ ನಡುವೆ ಒಂದು ಟ್ರಿಪ್ ಓಣಂ ವಿಶೇಷ ರೈಲು ಸೇವೆಯನ್ನು ಓಡಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ನೈಋತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿಗಳು ವೇಳಾಪಟ್ಟಿ ನೀಡಿದ್ದಾರೆ. ಹುಬ್ಬಳ್ಳಿ-ಕೊಚುವೇಲಿ ವಿಶೇಷ ಓಣಂ ಎಕ್ಸ್ಪ್ರೆಸ್ ರೈಲುಗಳ (ಸಂಖ್ಯೆ 07333/07334) ಪೈಕಿ ಒಂದು ರೈಲು (ಸಂಖ್ಯೆ 07333) ಸೆಪ್ಟೆಂಬರ್ 13ರಂದು ಬೆಳಗ್ಗೆ 06:55 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಸಂಚಾರ ಆರಂಭಿಸಿ, ಮರುದಿನ ಬೆಳಗ್ಗೆ 06:45 ಕ್ಕೆ ಕೊಚುವೇಲಿ ತಲುಪಲಿದೆ.
ಮರಳಿ ಕೊಚುವೆಲ್ಲಿಯಿಂದ ರೈಲು (ಸಂಖ್ಯೆ 07334) ಸೆಪ್ಟೆಂಬರ್ 14 ರಂದು ಮಧ್ಯಾಹ್ನ 12:50 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 12:50 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಬಂದು ಸೇರಲಿದೆ.
ನಿಲುಗಡೆಯ ನಿಲ್ದಾಣಗಳ ಮಾಹಿತಿ
ಈ ರೈಲು ಎರಡೂ ದಿಕ್ಕುಗಳಲ್ಲಿ ಈ ಓಣಂ ವಿಶೇಷ ರೈಲು ಎಸ್ಎಂಎಂ ಹಾವೇರಿ, ರಾಣಿಬೆನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಚಿಕ್ಕಬಾಣಾವರ, ಎಸ್ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪೂರು, ಕೊಯಮತ್ತೂರು, ಪಾಲಕ್ಕಾಡ್, ತ್ರಿಶೂರ್, ಅಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ತಿರುವಲ್ಲಾ, ಚೆಂಗಣ್ಣೂರ್, ಕಾಯಂಕುಲಂ ಮತ್ತು ಕೊಲ್ಲಂ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಈ ವಿಶೇಷ ರೈಲಿನಲ್ಲಿ ಎರಡು ಎಸಿ-2 ಟೈಯರ್, ನಾಲ್ಕು ಎಸಿ -3 ಟೈಯರ್, ಹತ್ತು ಸ್ಟೀಪರ್ ಕ್ಲಾಸ್, ಎರಡು ಸಾಮಾನ್ಯ ದ್ವಿತೀಯ ದರ್ಜೆ ಮತ್ತು ಎರಡು ಎಸ್ಎಲ್ಆರ್ / ಡಿ ಬೋಗಿಗಳು ಸೇರಿದಂತೆ ಒಟ್ಟು 20 ಬೋಗಿಗಳಿವೆ ಎಂದು ರೈಲ್ವೆಯು ಪ್ರಕಟಣೆಯಲ್ಲಿ ತಿಳಿಸಿದೆ