Breaking News

ಶತಮಾನದ ಶಾಲೆಗಳಿಗೆ ‘ಕನ್ನಡದ ಬಣ್ಣ’

Spread the love

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹಿರೇಬುದನೂರ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ಹಾರುಗೊಪ್ಪದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡಕ್ಕೆ ಬೆಂಗಳೂರಿನ ‘ಕನ್ನಡ ಮನಸುಗಳು ಕರ್ನಾಟಕ’ ತಂಡದ ಸದಸ್ಯರು ಬಣ್ಣ ಬಳಿದು, ಹೊಸ ರೂಪ ನೀಡಿದ್ದಾರೆ.

 

ಬಣ್ಣ ಹಚ್ಚಿದರೆ ಸಾಲದು, ಆವರಣ ವಿಶಿಷ್ಟವಾಗಿಸಲು ಶಾಲಾ ತರಗತಿ ಕೊಠಡಿಯ ಗೋಡೆಗಳ ಮೇಲೆ ಮಹಾನ್‌ ನಾಯಕರು, ಪ್ರಾಣಿ-ಪಕ್ಷಿಗಳ ಚಿತ್ರಗಳನ್ನು ರಚಿಸಿದ್ದಾರೆ. ನಲಿ-ಕಲಿ ತರಗತಿಗೆ ಪೂರಕ ಚಿತ್ರಗಳನ್ನು ಬಿಡಿಸಿದ್ದಾರೆ.

1918ರಲ್ಲಿ ಸ್ಥಾಪಿತ ಹಿರೇಬುದನೂರ ಸರ್ಕಾರಿ ಶಾಲೆ ಮತ್ತು 1909ರಲ್ಲಿ ಸ್ಥಾಪಿತ ಹಾರುಗೊಪ್ಪದ ಸರ್ಕಾರಿ ಶಾಲೆ 8 ವರ್ಷಗಳಿಂದ ಬಣ್ಣ ಕಂಡಿರಲಿಲ್ಲ. ಇದಕ್ಕೆ ಅನುದಾನವೂ ಇರಲಿಲ್ಲ.

‘ವಿವಿಧ ವೃತ್ತಿಗಳಲ್ಲಿ ಇರುವ ಸಮಾನ ಮನಸ್ಕರು ಸೇರಿ ‘ಕನ್ನಡ ಮನಸುಗಳು ಕರ್ನಾಟಕ’ ತಂಡ ಕಟ್ಟಿಕೊಂಡಿದ್ದೇವೆ. ನಾವು ಮತ್ತು ವಿವಿಧ ದಾನಿಗಳ ನೆರವಿನಿಂದ ಸರ್ಕಾರಿ ಶಾಲೆ ಉಳಿಸಿ ಅಭಿಯಾನದಡಿ ₹2.5 ಲಕ್ಷ ವೆಚ್ಚದಲ್ಲಿ ಎರಡೂ ಶಾಲೆಗಳಿಗೆ ಬಣ್ಣ ಬಳಿದಿದ್ದೇವೆ’ ಎಂದು ತಂಡದ ಸಂಸ್ಥಾಪಕ ಅಧ್ಯಕ್ಷ ಪವನ ದರೇಗುಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘2017ರಿಂದ ಸರ್ಕಾರಿ ಶಾಲೆ ಉಳಿಸಿ ಅಭಿಯಾನ ಕೈಗೊಂಡಿದ್ದೇವೆ. ಬೆಳಗಾವಿ, ಹಾವೇರಿ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈವರೆಗೆ 52 ಶಾಲೆಗಳಿಗೆ ಬಣ್ಣ ಬಳಿದಿದ್ದೇವೆ’ ಎಂದರು.

‘ನಾನು ಕಲಿತ ಹಿರೇಬುದನೂರಿನ ಶಾಲೆ ಬಣ್ಣ ಕಾಣದ್ದನ್ನು ಕಂಡು ಬೇಸರವಾಗಿತ್ತು. ಅದಕ್ಕೆ ‘ಕನ್ನಡ ಮನಸುಗಳು ಕರ್ನಾಟಕ’ ತಂಡ ಸಂಪರ್ಕಿಸಿದೆ. ಹಲವು ಸ್ವಯಂಸೇವಕರು ಆಗಸ್ಟ್ 24 ಮತ್ತು 25ರಂದು ಇಡೀ ಶಾಲೆಗೆ ಬಣ್ಣ ಬಳಿದರು’ ಎಂದು ಹಳೇ ವಿದ್ಯಾರ್ಥಿ ಉಮೇಶ್ವರ ಮರಗಾಲ ತಿಳಿಸಿದರು.


Spread the love

About Laxminews 24x7

Check Also

ಗೋವುಗಳನ್ನು ಸ್ಥಳಾಂತರಿಸುತ್ತಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ಶ್ರೀರಾಮಸೇನೆ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿಹಾಕಿ ದೊಣ್ಣೆಯಿಂದ ಹೊಡೆದಿ

Spread the loveಗೋವುಗಳನ್ನು ಸ್ಥಳಾಂತರಿಸುತ್ತಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ಶ್ರೀರಾಮಸೇನೆ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿಹಾಕಿ ದೊಣ್ಣೆಯಿಂದ ಹೊಡೆದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ