ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸ್ಸೇಜ್ ಮಾಡಿದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಸ್ವಾಮಿಯನ್ನು ಭೀಕರವಾಗಿ ಕೊಲೆ ಮಾಡಿ ಜೈಲು ಪಾಲಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್ನ ಕರಾಳ ಕೃತ್ಯಗಳು ದಿನ ಕಳೆದಂತೆ ಒಂದೊಂದೇ ಬಯಲಾಗುತ್ತಿದೆ.
ನಿಜಜೀವನದಲ್ಲಿ ಮಾದರಿಯಾಗಬೇಕಿದ್ದ ಸ್ಟಾರ್ ನಟನ ಈ ಕೃತ್ಯ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಚಾರ್ಜ್ಶೀಟ್ನಲ್ಲಿ ಪೊಲೀಸರು ಉಲ್ಲೇಖಿಸಿರುವ ಆಘಾತಕಾರಿ ಅಂಶಗಳು ಡಿ ಗ್ಯಾಂಗ್ನ ಕರಾಳ ಮುಖವನ್ನು ಹೊರಜಗತ್ತಿಗೆ ಪರಿಚಯಿಸುತ್ತಿದೆ.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ದರ್ಶನ್ ಗೆಳತಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರದಲ್ಲಿ ದಿನ ದೂಡುತ್ತಿದ್ದು, ಕೋರ್ಟ್ ಕೆಲ ದಿನಗಳ ಹಿಂದೆ ಇವರ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು. ಇದೀಗ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದು, ಅರೋಪಿಗಳಿಗೆ ಮತ್ತಷ್ಟು ಟೆನ್ಷನ್ ಜಾಸ್ತಿ ಆಗುವಂತೆ ಮಾಡಿದೆ.
ಪಟ್ಟಣಗೆರೆ ಶೆಡ್ನಲ್ಲಿ ರೇಣುಕಸ್ವಾಮಿ ಹತ್ಯೆಯ ಬಳಿಕ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ಮನೆಗೆ ತೆರಳಿದ್ದು, ಮಾರನೇ ದಿನ ಸಂಜೆ ಡೆವಿಲ್ ಶೂಟಿಂಗ್ ನಿಮಿತ ಮೈಸೂರಿಗೆ ಹೊರಟಿದ್ದಾರೆ. ಇತ್ತ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಹತ್ಯೆ ನಡೆದ ಮಾರನೇ ದಿನ ಬ್ಯೂಟಿ ಪಾರ್ಲರ್ಗೆ ಹೋಗಿದ್ದರಂತೆ. ಈ ಬಗ್ಗೆ ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದು, ಈ ಬಗ್ಗೆ ಸಾಕ್ಷ್ಯಧಾರಗಳನ್ನು ಒದಗಿಸಿದ್ದಾರೆ.