ನವದೆಹಲಿ: ಇಂದು ನವದೆಹಲಿಯಲ್ಲಿ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಹೊಸದಾಗಿ ಮೂರು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದರು. ಈ ಮೂಲಕ ಉತ್ತರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಾದ್ಯಂತ ರೈಲು ಸಂಪರ್ಕವನ್ನು ಹೆಚ್ಚಿಸಿದರು.
ರೈಲ್ವೇ ಸಚಿವಾಲಯವು ಭಾರತದ ‘ಮೇಕ್ ಇನ್ ಇಂಡಿಯಾ’ ಮತ್ತು ಆತ್ಮನಿರ್ಭರ್ ಭಾರತ್ ಉಪಕ್ರಮಗಳೊಂದಿಗೆ ಹೊಂದಿಕೆಯಾಗುವ, ವೇಗವಾದ, ಹೆಚ್ಚು ಆರಾಮದಾಯಕ ಪ್ರಯಾಣವನ್ನು ಉತ್ತೇಜಿಸುವಲ್ಲಿ ಈ ರೈಲುಗಳ ಮಹತ್ವವನ್ನು ಎತ್ತಿ ತೋರಿಸಿದೆ.
ದೇಶದ ವಿಕಾಸಯಾತ್ರೆ ಅಡಿಯಲ್ಲಿ ಎಲ್ಲೆಡೆ ಸಂಪರ್ಕ ಕಲ್ಪಿಸಲಾಗುತ್ತಿದೆ. ವಿಸ್ತರಿಸಿದ ವಂದೇ ಭಾರತ್ ವಿಕಸಿತ ಭಾರತಕ್ಕೆ ಪೂರಕವಾಗಿದೆ. ಮಂದಿರ ನಗರ ಮದುರೈಯನ್ನು ದೇಶದ ಇಟಿ ನಗರ ಬೆಂಗಳೂರು ಜೊತೆ ಸಂಪರ್ಕಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದರಲ್ಲಿ ಬೆಂಗಳೂರು=ತಮಿಳುನಾಡಿನ ಮಧುರೈ ನಡುವೆ ಸಂಚರಿಸುವ ಹೊಸ ವಂದೇ ಭಾರತ್ ರೈಲು ಸೇರಿದೆ. ಕೇಸರಿ ಬಣ್ಣದ ಈ ಹೊಸ ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಮಧುರೈ-ಬೆಂಗಳೂರು ಬೆಂಗಳೂರು-ಮಧುರೈ ಸಂಚರಿಸಲಿದೆ.
ಬೆಂಗಳೂರು ಮದುರೈ ನಡುವಿನ 430 ಕಿಲೋಮೀಟರ್ ದೂರ ಪ್ರಯಾಣವನ್ನು ವಂದೇ ಭಾರತ್ ರೈಲು 8 ಗಂಟೆಯಲ್ಲಿ ಕ್ರಮಿಸಲಿದೆ. ಹಾಲಿ ಇರುವ ಎಕ್ಸ್ಪ್ರೆಸ್ ರೈಲುಗಳು ಈ ದೂರ ಕ್ರಮಿಸಲು 9 ಗಂಟೆ ಸಮಯ ತೆಗದುಕೊಳ್ಳುತ್ತದೆ. ಮಧುರೈಯಿಂದ 20671 ವಂದೇ ಭಾರತ್ ರೈಲು ಹಾಗೂ ಬೆಂಗಳೂರಿನಿಂದ 20672 ರೈಲು ಪ್ರಯಾಣ ನಡೆಸಲಿದೆ. ಬೆಂಗಳೂರಿನ ಕಂಟೊನ್ಮೆಂಟ್ ರೈಲು ನಿಲ್ದಾಣದಿಂದ ಮಧ್ಯಾಹ್ನ 1.30ಕ್ಕೆ ಈ ರೈಲು ಹೊರಡಲಿದೆ. ಬೆಂಗಳೂರಿನ ಕೆಆರ್ ಪುರಂ ರೈಲು ನಿಲ್ದಾಣದಲ್ಲಿ ಮೊದಲ ನಿಲುಗಡೆಯಾಗಲಿದೆ. ಬಳಿಕ ಸೇಲಂ, ನಮಕ್ಕಲ್, ಕರೂರ್, ತಿರುಚಿರಾಪಲ್ಲಿ, ದಿಂಡುಗಲ್ ರೈಲು ನಿಲ್ದಾಣದಲ್ಲಿ ನಿರುಗಡೆಯಾಗಲಿದೆ. ಮಧ್ಯಾಹ್ನ 1.30ಕ್ಕೆ ಹೊರಟ ರೈಲು ಮದುರೈಗೆ ರಾತ್ರಿ 9.45ಕ್ಕೆ ತಲುಪಲಿದೆ. ಮದುರೈನಿಂದ ಬೆಳಗ್ಗೆ 5.15ಕ್ಕೆ ಹೊರಡುವ ರೈಲು ಮಧ್ಯಾಹ್ನ 1.ಗಂಟೆಗೆ ಬೆಂಗಳೂರು ತಲುಪಲಿದೆ.