ಬೆಳಗಾವಿ: ಅತಿವೃಷ್ಟಿ ಹಾಗೂ ಪ್ರವಾಹದಿಂದ ಜಿಲ್ಲೆಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತಕ್ಕೆ(ಹೆಸ್ಕಾಂಗೆ) ಈ ಬಾರಿ ಮಳೆಗಾಲದಲ್ಲಿ ₹11.29 ಕೋಟಿ ನಷ್ಟವಾಗಿದೆ. ಹಾನಿಗೀಡಾದ ವಿದ್ಯುತ್ ಪರಿಕರಗಳ ದುರಸ್ತಿ ಕಾರ್ಯ ನಡೆದಿದೆ.
2019ರಲ್ಲಿ ಭೀಕರ ಪ್ರವಾಹದಿಂದ ಹೆಸ್ಕಾಂ ತತ್ತರಿಸಿತ್ತು.
ಆಗ ಬೆಳಗಾವಿ ಜಿಲ್ಲೆಯಲ್ಲಿ 17 ಸಾವಿರಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿತ್ತು. 5 ಸಾವಿರ ವಿದ್ಯುತ್ ಪರಿವರ್ತಕಗಳು ನೀರಲ್ಲಿ ಮುಳುಗಿದ್ದವು.
ಈ ಬಾರಿ ಮಲಪ್ರಭಾ, ಘಟಪ್ರಭಾ, ಕೃಷ್ಣಾ, ಹಿರಣ್ಯಕೇಶಿ, ದೂಧಗಂಗಾ, ವೇದಗಂಗಾ, ಮಾರ್ಕಂಡೇಯ ನದಿಗಳು ಉಕ್ಕಿ ಹರಿದಿದ್ದರಿಂದ ಮತ್ತು ಸತತ ಮಳೆಯಾಗಿದ್ದರಿಂದ ವಿದ್ಯುತ್ ಪರಿಕರಗಳು ಮತ್ತೆ ಹಾನಿಗೀಡಾಗಿವೆ.
ನದಿಪಾತ್ರದ ಕೃಷಿಭೂಮಿಯಲ್ಲಿ ನೀರು ಸರಿಯದಿರುವುದು, ಕೆಸರಿನ ಕಾರಣಕ್ಕೆ ಕೆಲವೆಡೆ ಪರಿಶೀಲನೆ ಮತ್ತು ದುರಸ್ತಿಗೆ ಅಡ್ಡಿಯಾಗಿದೆ. ಈ ಪ್ರಕ್ರಿಯೆ ಮುಗಿದರೆ ಹಾನಿಯ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
2,981 ಕಂಬಗಳಿಗೆ ಹಾನಿ:
ಬೆಳಗಾವಿ ವೃತ್ತದಲ್ಲಿ 1,917, ಚಿಕ್ಕೋಡಿ ವೃತ್ತದಲ್ಲಿ 1,064 ಸೇರಿದಂತೆ ಜಿಲ್ಲೆಯಲ್ಲಿ 2,981 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಈ ಪೈಕಿ ಸವದತ್ತಿ(496), ರಾಯಬಾಗ(417), ನಿಪ್ಪಾಣಿ(361) ತಾಲ್ಲೂಕುಗಳಲ್ಲೇ ಹೆಚ್ಚಿನ ಹಾನಿ ಸಂಭವಿಸಿದೆ. ಈ ಪೈಕಿ 2,864 ವಿದ್ಯುತ್ ಕಂಬ ಹೊಸದಾಗಿ ಅಳವಡಿಸಲಾಗಿದ್ದು, 117 ಕಂಬಗಳ ಅಳವಡಿಕೆಯಷ್ಟೇ ಬಾಕಿ ಇದೆ.
ಗೋಕಾಕ ತಾಲ್ಲೂಕಿನಲ್ಲೇ ಅಧಿಕ:
ಬೆಳಗಾವಿ ವೃತ್ತದಲ್ಲಿ 382, ಚಿಕ್ಕೋಡಿ ವೃತ್ತದಲ್ಲಿ 129 ಸೇರಿ ಜಿಲ್ಲೆಯಲ್ಲಿ 511 ವಿದ್ಯುತ್ ಪರಿವರ್ತಕಗಳಿಗೆ ಅಧಿಕ ಹಾನಿಯಾಗಿದೆ. ಈ ಪೈಕಿ ಗೋಕಾಕ ತಾಲ್ಲೂಕುವೊಂದರಲ್ಲೇ 175 ವಿದ್ಯುತ್ ಪರಿವರ್ತಕ ಹಾನಿಗೀಡಾಗಿವೆ. ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ಈ ಅವಾಂತರ ಸೃಷ್ಟಿಯಾಗಿದೆ.
ಉಳಿದಂತೆ, ಮೂಡಲಗಿಯಲ್ಲಿ 80, ಬೆಳಗಾವಿಯಲ್ಲಿ 70, ಚಿಕ್ಕೋಡಿಯಲ್ಲಿ 66, ನಿಪ್ಪಾಣಿಯಲ್ಲಿ 53 ವಿದ್ಯುತ್ ಪರಿವರ್ತಕಕ್ಕೆ ಹಾನಿ ಉಂಟಾಗಿದೆ. 509 ಹೊಸ ವಿದ್ಯುತ್ ಪರಿವರ್ತಕಗಳ ಅಳವಡಿಕೆಯಾಗಿದ್ದು, ಇನ್ನೆರಡಷ್ಟೇ ಅಳವಡಿಸುವುದು ಬಾಕಿ ಉಳಿದಿದೆ.
ಬೆಳಗಾವಿ ತಾಲ್ಲೂಕಿನಲ್ಲಿ 44.51 ಕಿ.ಮೀ., ಖಾನಾಪುರದಲ್ಲಿ 61.90 ಕಿ.ಮೀ., ಸವದತ್ತಿಯಲ್ಲಿ 1.06 ಕಿ.ಮೀ. ಸೇರಿದಂತೆ ಜಿಲ್ಲೆಯಲ್ಲಿ 107.47 ಕಿ.ಮೀ. ವಿದ್ಯುತ್ ತಂತಿಗೆ ಹಾನಿಯಾಗಿದೆ.