ಬೆಂಗಳೂರು: ಮುಡಾ ಹಗರಣದಲ್ಲಿ ತಮ್ಮ ವಿರುದ್ಧ ರಾಜ್ಯಪಾಲರು ಹೊರಡಿಸಿರುವ ಪ್ರಾಸಿಕ್ಯೂಷನ್ ವಿರುದ್ಧ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಂಥ ಹಿರಿಯ ಅನುಭವಿ ನ್ಯಾಯವಾದಿಗಳು ವಾದ ಮಂಡಿಸುತ್ತಿದ್ದರೂ ಕೂಡ ಹೈಕೋರ್ಟ್ನಲ್ಲಿ ತಡೆಯಾಜ್ಞೆ ಪಡೆಯುವಲ್ಲಿ ವಿಫಲರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್ಐಆರ್ ದಾಖಲಾದರೆ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಸಮರ್ಥರಾಗಿರುತ್ತಾರೆಯೇ ಎಂಬ ಬಗ್ಗೆ ನಿರ್ಣಾಯಕ ಪ್ರಶ್ನೆ ಎದ್ದಿದೆ.
ಈ ಬೆಳವಣಿಗೆಗೆ ಪ್ರತಿಯಾಗಿ, ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ಬೆಳವಣಿಗೆಗಳು ಮತ್ತೊಂದೆಡೆ ನಡೆಯುತ್ತಿದೆ. ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಒಂದು ಕಾಲದ ತಮ್ಮ ಪ್ರತಿಸ್ಪರ್ಧಿ ಸತೀಶ್ ಜಾರಕಿಹೊಳಿ ಅವರನ್ನು ಗುಪ್ತವಾಗಿ ಭೇಟಿ ಮಾಡಿ ಸುಮಾರು 40 ನಿಮಿಷಗಳ ಖಾಸಗಿ ಚರ್ಚೆ ನಡೆಸಿದ್ದಾರೆ. ಉಳಿದವರನ್ನು ಬಿಟ್ಟು ಈ ಇಬ್ಬರೇ ನಾಯಕರು ಭೇಟಿ ಮಾಡಿ ಮಾತುಕತೆ ನಡೆಸಿದ್ದು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಶೀಘ್ರದಲ್ಲೇ ಕೆಪಿಸಿಸಿ ಅಧ್ಯಕ್ಷರಾಗಿ ಸತೀಶ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ, ಅದರ ಸಂಬಂಧವೇ ಇಬ್ಬರೂ ಭೇಟಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಳೆದ ಕೆಲವು ವರ್ಷಗಳಲ್ಲಿ ಸತೀಶ್ ಜಾರಕಿಹೊಳಿ ಅವರ ಸಹೋದರ ರಮೇಶ್ ಜಾರಕಿಹೊಳಿ ಅವರ ವಿವಾದಾತ್ಮಕ ವೀಡಿಯೊ ಕಾಣಿಸಿಕೊಂಡ ನಂತರ ಉಭಯ ನಾಯಕರ ನಡುವಿನ ಸಂಬಂಧ ಸುಧಾರಿಸಿತ್ತು. ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ ರಾಜ್ಯಕ್ಕೆ ಭಾರಿ ಸವಾಲು ಎದುರಾಗಲಿದೆ ಎಂದು ರಮೇಶ್ ಜಾರಕಿಹೊಳಿ ಇತ್ತೀಚೆಗೆ ಪ್ರತಿಕ್ರಿಯಿಸಿದ್ದರು. ಇವೆಲ್ಲಾ ಬೆಳವಣಿಗೆ ಬಗ್ಗೆ ಚರ್ಚಿಸಲು ಮತ್ತು ಮುಂದಿನ ಕ್ರಮ ಕೈಗೊಳ್ಳಲು ಉಭಯ ನಾಯಕರು ಭೇಟಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆಲವು ವರ್ಷಗಳ ಹಿಂದೆ ಬೆಳಗಾವಿ ರಾಜಕೀಯ ಮತ್ತು ಸಹಕಾರಿ ಬ್ಯಾಂಕ್ಗಳ ಹಿಡಿತದ ವಿಚಾರದಲ್ಲಿ ಇಬ್ಬರ ನಡುವೆ ಜಟಾಪಟಿ ನಡೆದಿತ್ತು. ಈ ಎಲ್ಲಾ ವೈಷಮ್ಯಗಳನ್ನು ಮರೆದು ಮುಂದಿನ ದಿನಗಳಲ್ಲಿ ಒಗ್ಗಟ್ಟಿನಿಂದ ಮುನ್ನಡೆಯೋಣ ಎಂದು ಸಾರಲು ಇಬ್ಬರೂ ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಉಭಯ ನಾಯಕರು ಈ ಹಿಂದೆ ಹಲವು ಬಾರಿ ಭೇಟಿಯಾಗಿದ್ದರೂ ಮಂಗಳವಾರದ ಸಭೆ ಸಾಕಷ್ಟು ಗಮನ ಸೆಳೆದಿದೆ ಎಂದು ಸತೀಶ್ ಜಾರಕಿಹೊಳಿ ಅವರ ಆಪ್ತ ಮೂಲಗಳು ತಿಳಿಸಿವೆ.
ಡಿ ಕೆ ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರು ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಸೋತರೆ, ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಗೆದ್ದಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಗ ಮೃಣಾಲ್ಗೆ ಸಹಾಯ ಮಾಡಲು ಶಿವಕುಮಾರ್ ಅವರ ಪ್ರಯತ್ನವೂ ವಿಫಲವಾಯಿತು. ಹೀಗಿರುವಾಗ ಇಬ್ಬರ ಭೇಟಿ ಮತ್ತು ಮಾತುಕತೆಯು ಕಾಂಗ್ರೆಸ್ನೊಳಗಿನ ಪ್ರಮುಖ ಬೆಳವಣಿಗೆಗಳನ್ನು ಸೂಚಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಬದಲಾವಣೆಯಾದರೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಅಧ್ಯಕ್ಷ ಜಿ.ಪರಮೇಶ್ವರ ಸೇರಿದಂತೆ ಸಂಭಾವ್ಯರ ಪಟ್ಟಿ ಇದೆ. ಆದರೆ ಶಿವಕುಮಾರ್ ಅವರು ಸಿಎಂ ಆಗುವ ಮಹತ್ವಾಕಾಂಕ್ಷೆಯನ್ನು ಈಡೇರಿಸಲು ಬಯಸಿದರೆ, ಸತೀಶ್ ಜಾರಕಿಹೊಳಿ ಅವರ ಬೆಂಬಲವು ನಿರ್ಣಾಯಕವಾಗಿದೆ, ಏಕೆಂದರೆ ಅವರು ಕಾಂಗ್ರೆಸ್ ಮತ್ತು ಬಿಜೆಪಿಯ 15-20 ಶಾಸಕರನ್ನು ನಿಯಂತ್ರಿಸುವ ಶಕ್ತಿ, ಸಾಮರ್ಥ್ಯ ಹೊಂದಿದ್ದಾರೆ.