ಎಂ.ಕೆ.ಹುಬ್ಬಳ್ಳಿ (ಬೆಳಗಾವಿ ಜಿಲ್ಲೆ): ಪಟ್ಟಣದ ಬಳಿ ಇರುವ ಗದ್ದಿಕೆರೆಯಲ್ಲಿ ಸೋಮವಾರ ಬೆಳಿಗ್ಗೆ ಶಾಲಾ ಬಾಲಕನ ಶವ ಪತ್ತೆಯಾಗಿದೆ.
ಎಂ.ಕೆ.ಹುಬ್ಬಳ್ಳಿಯಲ್ಲಿ 9ನೇ ತರಗತಿ ಓದುತ್ತಿದ್ದ ರಿಹಾನ್ ಮುಗುಟಸಾಬ ನಗಾರಸಿ (15) ಮೃತ ಬಾಲಕ. ಭಾನುವಾರ ಶಾಲೆಗೆ ರಜೆ ಇದ್ದುದರಿಂದ ಬಾಲಕ ಕೆರೆಗೆ ಈಜಲು ಹೋಗಿದ್ದ.
ಮರಳಿ ಮನೆಗೆ ಬಂದಿರಲಿಲ್ಲ. ಕೆರೆ ದಡದಲ್ಲಿ ಬಾಲಕನ ಬಟ್ಟೆ ಹಾಗೂ ಚಪ್ಪಲಿ ಪತ್ತೆಯಾದವು. ಅನುಮಾನಗೊಂಡು ಸೋಮವಾರ ಕೆರೆಯಲ್ಲಿ ಹುಡುಕಾಟ ಶುರು ಮಾಡಲಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು, ಅಗ್ನಿಶಾಮಕ ದಳ ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆಯ ಸಿಬ್ಬಂದಿ ಬಾಲಕನ ಶವ ಪತ್ತೆ ಮಾಡಿದರು.
ಈಜಲು ಹೋದ ಬಾಲಕ ಹೇಗೆ ಮುಳುಗಿದ ಎಂಬುದು ಇನ್ನೂ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.