ಬೆಂಗಳೂರು: ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ ಪತ್ನಿ, ರಾಜ್ಯಸಭಾ ಸಂಸೆ ಸುಧಾಮೂರ್ತಿ ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಗೆ ಸುದ್ದಿಯಲ್ಲಿರುತ್ತಾರೆ. ಪ್ರಸಿದ್ಧ ಬರಹಗಾರರು ಆದ ಸುಧಾಮೂರ್ತಿ ಅವರು ಬಹುಪಾಲು ಸಮಯ ಸಮಾಜಸೇವೆಯಲ್ಲಿ ತೊಡಗಿರುತ್ತಾರೆ.
ಇಂದು (ಆಗಸ್ಟ್ 19) ಎಲ್ಲೆಡೆ ರಾಖಿ ಹಬ್ಬದ ಸಂಭ್ರಮ. ಅಣ್ಣ-ತಂಗಿಯರ ಈ ಪವಿತ್ರ ಹಬ್ಬದ ಕುರಿತು ಸುಧಾಮೂರ್ತಿ ಅವರು ಹೇಳಿರುವ ಮಾತುಗಳು ಜಾಲತಾಣದಲ್ಲಿ ವೈರಲ್ ಆಗುತಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಸುಧಾಮೂರ್ತಿ ಅವರು ರಕ್ಷಾಬಂಧನ ಆಚರಣೆಯ ಮೂಲವನ್ನು ಮೊಘಲ್ ಚಕ್ರವರ್ತಿ ಹುಮಾಯೂನ್ಗೆ ಲಿಂಕ್ ಮಾಡಿ ವಿಷಯ ಪ್ರಸ್ತಾಪಿಸಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ರಕ್ಷಾಬಂಧನಕ್ಕೆ ಶ್ರೀಮಂತ ಇತಿಹಾಸವಿದೆ. ರಾಣಿ ಕರ್ಣಾವತಿ ಆಪತ್ತಿನಲ್ಲಿದ್ದಾಗ ಅವಳು ಸಹೋದರತ್ವದ ಸಂಕೇತವಾಗಿ ರಾಜ ಹುಮಾಯೂನ್ಗೆ ದಾರವನ್ನು ಕಳುಹಿಸಿ ಅವನ ಸಹಾಯವನ್ನು ಕೇಳುತ್ತಾಳೆ. ಅಂದಿನಿಂದ ಈ ದಾರದ ಸಂಪ್ರದಾಯ ಪ್ರಾರಂಭವಾಯಿತು. ಅದು ಇಂದಿಗೂ ಮುಂದುವರಿದಿದೆ ಎಂದು ಹೇಳಿದ್ದಾರೆ.
ಅವರ ಈ ಪೋಸ್ಟ್ಗೆ ನೆಟ್ಟಿಗರು ಕಿಡಿ ಕಾರಿದ್ದಾರೆ. ಜೆಎನ್ಯುನಿಂದ ಪ್ರೇರಿತವಾದ ನಕಲಿ ಇತಿಹಾಸವನ್ನು ಸೃಷ್ಟಿಸುವುದನ್ನು ನಿಲ್ಲಿಸಿ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು ರಾಜ್ಯಸಭಾ ಸಂಸದೆ ಅವರು ಹೆಚ್ಚು ಓದಬೇಕು ಎಂದು ಸಲಹೆ ನೀಡಿದ್ದಾರೆ. ನೀವು ಈ ಅಸಂಬದ್ಧ ಕಥೆಯನ್ನು ನಂಬಿದರೆ ಭಾರತೀಯ ಹಬ್ಬಗಳು ಮತ್ತು ಸಂಸ್ಕೃತಿಯ ಬಗ್ಗೆ ನಿಮಗೆ ಏನೂ ತಿಳಿದಿಲ್ಲ ಎಂದು ಅರ್ಥವಾಗುತ್ತದೆ. ಕ್ಷಮಿಸಿ ನಾನು ನಿಮ್ಮ ಪುಸ್ತಕಗಳನ್ನು ಓದಲು ಮಕ್ಕಳಿಗೆ ಶಿಫಾರಸು ಮಾಡಿದ್ದೇನೆ. ಆದರೆ ಈ ಕಪೋಲಕಲ್ಪಿತ ಕಥೆಯನ್ನು ಕಲಿಯುವ ಅಗತ್ಯವಿಲ್ಲ. ದಯವಿಟ್ಟು ನೀವು ದೌಪ್ರದಿಯ ರಕ್ಷಾಸೂತ್ರ ಮತ್ತು ಶ್ರಾವಣ ಪೂರ್ಣಿಮೆ ಮಹತ್ವದ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ.
ಅಸಲಿಗೆ ಪುರಾಣದಲ್ಲಿ ಕರ್ಣಾವತಿ ಮತ್ತು ಹುಮಾಯೂನ್ಗೆ ಸಂಬಂಧಿಸಿದ ಕಥೆಯಿದೆ. ರಾಣಿ ಕರ್ಣಾವತಿ ತನ್ನ ಪತಿ ರಾಣಾ ಸಂಗನ ಮರಣದ ನಂತರ ಮೇವಾರದ ರಾಜಪ್ರತಿನಿಧಿಯಾಗಿದ್ದಳು ಎಂದು ಹೇಳಲಾಗುತ್ತದೆ. ಬಹದ್ದೂರ್ ಷಾ ಮೇವಾರ್ ಮೇಲೆ ದಾಳಿ ಮಾಡಿದಾಗ, ಕರ್ಣಾವತಿ ಸಹಾಯಕ್ಕಾಗಿ ಮೊಘಲ್ ಚಕ್ರವರ್ತಿ ಹುಮಾಯೂನ್ಗೆ ಪತ್ರ ಬರೆದು ರಕ್ಷಣೆಗಾಗಿ ರಾಖಿಯನ್ನು ಕಳುಹಿಸಿದಳು. ಆದರೆ ಚಕ್ರವರ್ತಿಯು ಸಮಯಕ್ಕೆ ಬರಲು ಸಾಧ್ಯವಾಗುವುದಿಲ್ಲ. ಅಂತಿಮವಾಗಿ ರಾಜ್ಯವನ್ನು ಕರ್ಣಾವತಿಯ ಮಗ ವಿಕ್ರಮಜಿತ್ಗೆ ಹಿಂದಿರುಗಿಸಿದ.