Breaking News

ಕೆರಾಡಿ ಸರ್ಕಾರಿ ಪ್ರಾಥಮಿಕ ಶಾಲೆಗೆ “ಕಾಂತಾರ’ ಕಳೆ!

Spread the love

ಕುಂದಾಪುರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಮೂಲಕ ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಜಾಗೃತಿಯ ಸಂಚಲನ ಸೃಷ್ಟಿಸಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರು ತಾನು ಕಲಿತ ಕೆರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನೇ ದತ್ತು ಪಡೆದು ಅದಕ್ಕೆ ಹೊಸ ಕಳೆ ನೀಡಿದ್ದಾರೆ.

 

ಕಾಂತಾರ ಚಿತ್ರದ ನಟನೆಗಾಗಿ ಶ್ರೇಷ್ಠ ನಟ ಪ್ರಶಸ್ತಿ ಪಡೆದಿರುವ ಅವರು ಕಳೆದ ಸ್ವಾತಂತ್ರ್ಯೋತ್ಸವ ದಿನದಂದೂ ಶಾಲೆಗೆ ಭೇಟಿ ನೀಡಿದ್ದರು. 71 ವರ್ಷಗಳ ಇತಿಹಾಸವಿರುವ ಕೆರಾಡಿ ಸರಕಾರಿ ಕನ್ನಡ ಹಿ.ಪ್ರಾ. ಶಾಲೆಯನ್ನು ಈ ಶೈಕ್ಷಣಿಕ ವರ್ಷದಿಂದ ಮುಂದಿನ ಐದು ವರ್ಷಗಳವರೆಗೆ ರಿಷಬ್‌ ಫೌಂಡೇಶನ್‌ ದತ್ತು ಪಡೆದಿದೆ. ಹೀಗಾಗಿ ಮುಚ್ಚುವ ಭೀತಿಯಲ್ಲಿದ್ದ ಶಾಲೆಗೆ ಮರುಜೀವ ಸಿಕ್ಕಿದೆ. ಶಿಕ್ಷಕರ ಕೊರತೆ, ಇನ್ನಿತರ ಸಮಸ್ಯೆಗಳಿಂದ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದ್ದ ಮಕ್ಕಳ ಸಂಖ್ಯೆ ಈ ವರ್ಷದಿಂದ ಏರುಗತಿಯಲ್ಲಿದೆ. ಕಳೆದ ವರ್ಷ 71, ಈ ವರ್ಷ 93: ಕಳೆದ ವರ್ಷ ಈ ಶಾಲೆಯಲ್ಲಿ 71 ಮಕ್ಕಳು ಕಲಿಯುತ್ತಿದ್ದರು. ಈ ಬಾರಿ ಎಲ್‌ಕೆಜಿ, ಯುಕೆಜಿ, 1ರಿಂದ 8ನೇ ತರಗತಿಯವರೆಗೆ

ವಿವಿಧ ತರಗತಿಗಳಿಗೆ ಒಟ್ಟಾರೆ 25 ಮಕ್ಕಳು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಪ್ರಸ್ತುತ ಈ ಶಾಲೆಯಲ್ಲಿ 93 ಮಕ್ಕಳು ಕಲಿಯುತ್ತಿದ್ದಾರೆ. ಮುಂದಿನ ವರ್ಷದಿಂದ ಈ ಸಂಖ್ಯೆ ನೂರರ ಗಡಿ ದಾಟುವ ನಿರೀಕ್ಷೆಯಿದೆ. 1ನೇ ತರಗತಿಗೆ 12 ಮಕ್ಕಳು ಸೇರ್ಪಡೆಯಾಗಿದ್ದು, ಹೊಸದಾಗಿ ಆರಂಭಿಸಲಾದ ಎಲ್‌ಕೆಜಿ – ಯುಕೆಜಿಯಲ್ಲಿ 21 ಮಕ್ಕಳಿದ್ದಾರೆ. ತಲಾ ಇಬ್ಬರು ಸರಕಾರಿ, ಅತಿಥಿ ಶಿಕ್ಷಕರಿದ್ದು, ರಿಷಬ್‌ ಫೌಂಡೇಶನ್‌ ನಿಂದ 4 ಗೌರವ ಶಿಕ್ಷಕರು ಸೇರಿದಂತೆ ಒಟ್ಟು 8 ಮಂದಿ ಶಿಕ್ಷಕರು ಬೋಧಿಸುತ್ತಿದ್ದಾರೆ.

ಕೈರಂಗಳ ಶಾಲೆಯನ್ನೂ ದತ್ತು ಪಡೆದಿದ್ದರು:

ಗಡಿನಾಡು ಕಾಸರಗೋಡಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿರುವುದನ್ನು “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಮೂಲಕ ಮನೋಜ್ಞವಾಗಿ ಚಿತ್ರಿಸಿದ್ದರು. ಆ ಬಳಿಕ ರಾಜ್ಯದಲ್ಲಿಯೂ ಕೆಲವೆಡೆಗಳಲ್ಲಿ ಕನ್ನಡ ಶಾಲೆಗಳ ಉಳಿಸುವ ಅಭಿಯಾನ ಆರಂಭಗೊಂಡವು. ಬಂಟ್ವಾಳ ತಾಲೂಕಿನ ಕೈರಂಗಳ ಕನ್ನಡ ಮಾಧ್ಯಮ ಹಿ.ಪ್ರಾ. ಶಾಲೆಯಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿತ್ತು. ಆಗ ಈ ಶಾಲೆಯಲ್ಲಿ 42 ಮಕ್ಕಳಿದ್ದು, ಆ ಬಳಿಕ ಮಕ್ಕಳ ಸಂಖ್ಯೆ 17ಕ್ಕೆ ಕುಸಿದು, ಮುಚ್ಚುವ ಹಂತದಲ್ಲಿತ್ತು. ಆದರೆ ತನ್ನ ಸಿನೆಮಾಕ್ಕಾಗಿ ಬಳಸಿ, ಕೈ ಕಟ್ಟಿ ಕುಳಿತುಕೊಳ್ಳದ ರಿಷಬ್‌ ಶೆಟ್ಟರು, ಈ ಕೈರಂಗಳ ಶಾಲೆಯನ್ನು ದತ್ತು ಪಡೆದು, ಮಾದರಿ ಶಾಲೆಯಾಗಿ ರೂಪಿಸುವ ಪಣ ತೊಟ್ಟಿದ್ದರು. ಮುಂದೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ವರ್ಷದೊಳಗೆ 84ಕ್ಕೆ ಏರಿತ್ತು.


Spread the love

About Laxminews 24x7

Check Also

5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ ರಜೆ ನೀಡಿ ಪಿಸಿಸಿಎಫ್ ಆದೇಶಿಸಿದ್ದಾರೆ.

Spread the loveಚಾಮರಾಜನಗರ: ಮಲೆಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ