ಕಾರವಾರ: ಸರ್ಕಾರಿ ಭೂಮಿ ಇದ್ದರೂ ಒತ್ತುವರಿಯಾಗುತ್ತಿರುವ ಪರಿಣಾಮ ಸರ್ಕಾರದ ಯೋಜನೆಗಳಿಗೆ ಜಾಗ ಸಿಗುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒತ್ತುವರಿ ತೆರವಿಗೆ ವೇಗ ನೀಡಲು ಕಂದಾಯ ಇಲಾಖೆ ಮುಂದಾಗಿದ್ದು, ಜಿಲ್ಲೆಯಲ್ಲಿ ಸರ್ವೆ ಕಾರ್ಯ ಚುರುಕುಗೊಂಡಿದೆ.
ಒತ್ತುವರಿಯಾಗಿರುವ ಸರ್ಕಾರಿ ಭೂಮಿಯ ಮಾಹಿತಿ ಕ್ರೂಢೀಕರಣಕ್ಕೆ ‘ಲ್ಯಾಂಡ್ ಬೀಟ್’ ಎಂಬ ಮೊಬೈಲ್ ಆಯಪ್ನ್ನು ಆರು ತಿಂಗಳ ಹಿಂದಷ್ಟೆ ಇಲಾಖೆ ಪರಿಚಯಿಸಿದೆ.
ಅದರ ಮೂಲಕ ಒತ್ತುವರಿಯಾಗಿರುವ ಸರ್ಕಾರಿ ಭೂಮಿಯ ಸಮೀಕ್ಷೆ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿರುವ 36,926 ಎಕರೆ ಸರ್ಕಾರಿ ಭೂಮಿ ಪೈಕಿ 4,011 ಎಕರೆಯಷ್ಟು ಒತ್ತುವರಿಯಾಗಿವೆ. ಈ ಪೈಕಿ ಅಕ್ರಮ-ಸಕ್ರಮ ಯೋಜನೆ ಅಡಿ 2,800 ಎಕರೆಗೂ ಹೆಚ್ಚು ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಕೆಯಾಗಿದೆ. ಕೆಲ ಒತ್ತುವರಿ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಅವುಗಳ ಹೊರತಾಗಿಯೂ 370.12 ಎಕರೆಯಷ್ಟು ಭೂಮಿಯ ಒತ್ತುವರಿಯಾಗಿರುವುದು ಲ್ಯಾಂಡ್ ಬೀಟ್ ಆಯಪ್ ಸಮೀಕ್ಷೆ ಮೂಲಕ ಖಚಿತವಾಗಿದೆ.
‘ಲ್ಯಾಂಡ್ ಬೀಟ್ ಆಯಪ್ ಮೂಲಕ ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮವಾರು ಸಮೀಕ್ಷೆ ನಡೆಸಿದ್ದಾರೆ. ಒತ್ತುವರಿಯಾದ ಸ್ಮಶಾನ, ಕೆರೆ ಮತ್ತು ಸರ್ಕಾರಿ ಪಡಾ ಸಮೀಕ್ಷೆಗೆ ಆದ್ಯತೆ ನೀಡಲಾಗಿದೆ. ರಸ್ತೆ, ಶಾಲೆ, ಸರ್ಕಾರಿ ಇಲಾಖೆಗಳಿಗೆ ನೀಡಲಾದ ಜಾಗಗಳನ್ನು ಸಮೀಕ್ಷೆ ಪಟ್ಟಿಯಿಂದ ಕೈಬಿಡಲಾಗಿದೆ. ಒತ್ತುವರಿಯಾಗಿರುವ ಜಾಗದ ಕುರಿತು ಡಿಜಿಟಲ್ ಮಾಹಿತಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ’ ಎಂದು ತಹಶೀಲ್ದಾರ ಒಬ್ಬರು ತಿಳಿಸಿದರು.