ಹೈದರಾಬಾದ್: ಪ್ಲಾಸ್ಟಿಕ್, ಬಿಯರ್ ಬಾಟಲ್, ಟಿನ್ಗಳನ್ನು ಎಲ್ಲೆಂದರಲ್ಲಿ ಎಸೆಯಬೇಡಿ. ಅದು ಪ್ರಕೃತಿಗೆ ಮಾರಕ ಎಂದು ಅದೆಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಸಹ ಜನರು ತಿಳಿದರೂ ತಿಳಿಯದಂತೆ ಇರುತ್ತಾರೆ. ಯಾರದ್ದೋ ತಪ್ಪಿಗೆ ಮತ್ಯಾರಿಗೋ ಶಿಕ್ಷೆ ಎನ್ನುವಂತೆ ಕುಡುಕರು ರಸ್ತೆ ಬದಿ ಬಿಸಾಡಿದ್ದ ಬಿಯರ್ ಟಿನ್ನಲ್ಲಿ ಸಿಲುಕಿ ನಾಗರಹಾವೊಂದು ಗಂಟೆಗಟ್ಟಲೇ ವಿಲವಿಲ ಒದ್ದಾಡಿದೆ.
ತೆಲಂಗಾಣದ ಜ್ಯೋತಿಯಾಲ ಜಿಲ್ಲೆಯ ನಲ್ಗೊಂಡ ಪ್ರದೇಶದಲ್ಲಿ ನಾಗರಹಾವೊಂದು ಬಿಯರ್ ಟಿನ್ನಲ್ಲಿ ಸಿಲುಕಿ ಯಮಯಾತನೆ ಅನುಭವಿಸಿದೆ. ಮೂರು ಗಂಟೆಗೂ ಹೆಚ್ಚು ಕಾಲ ಬಿಯರ್ ಟಿನ್ನಲ್ಲಿ ನಾಗರಹಾವಿನ ತಲೆ ಸಿಕ್ಕಿಹಾಕಿಕೊಂಡು ನರಳಾಡಿದೆ. ಬಿಯರ್ ಟಿನ್ನಲ್ಲಿ ಸಿಲುಕಿಕೊಂಡು ನಾಗರಹಾವು ರಸ್ತೆಯಲ್ಲಿ ಅತ್ತಿಂದಿತ್ತ ಹೊರಳಾಡುವ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಯರ್ ಟಿನ್ನಲ್ಲಿ ಸಿಲುಕಿ ಹಾವು ಒದ್ದಾಡುವುದನ್ನು ಕಂಡ ಸ್ಥಳೀಯರು ಕೂಡಲೇ ಉರಗತಜ್ಞರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಉರಗ ತಜ್ಞರು ಕಾರ್ಯಾಚರಣೆ ನಡೆಸಿ ಬಿಯರ್ ಟಿನ್ನಿಂದ ನಾಗರಹಾವನ್ನು ಹೊರತೆಗೆದು ರಕ್ಷಿಸಿದ್ದಾರೆ. ಪ್ರಾಣಪಾಯದಿಂದ ಪಾರಾದ ನಾಗರಹಾವು ಅಲ್ಲೇ ಇದ್ದ ಪೊದೆಯೊಳಕ್ಕೆ ಓಡಿದೆ. ಸದ್ಯ ಈ ದೃಶ್ಯ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.