ಕಲಬುರಗಿ: ‘ಯುವಕರಲ್ಲಿ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಜ್ಞಾನದ ಕೌಶಲ ವೃದ್ಧಿಗಾಗಿ ರಾಜ್ಯದ 45 ಕಾಲೇಜುಗಳಲ್ಲಿ ನಾಲ್ಕು ಹೊಸ ಕೋರ್ಸ್ಗಳು ಪ್ರಸಕ್ತ ವರ್ಷದಿಂದ ಆರಂಭವಾಗಲಿದ್ದು, 1,500 ವಿದ್ಯಾರ್ಥಿಗಳಿಗೆ ಪ್ರವೇಶ ಸಿಗಲಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರದ ಸ್ಕಿಲ್ ಸೆಕ್ಟರ್ ಕೌನ್ಸಿಲ್ ಅಡಿ ಬಿ.ಕಾಂ ಇನ್ ಲಾಜಿಸ್ಟಿಕ್, ಬಿ.ಕಾಂ ಇನ್ ಇ-ಕಾಮರ್ಸ್, ಬಿ.ಕಾಂ ಇನ್ ರಿಟೇಲ್ ಹಾಗೂ ಬ್ಯಾಂಕಿಂಗ್ ಆಯಂಡ್ ಫೈನಾನ್ಸ್ ಕೋರ್ಸ್ಗಳು ಶುರುವಾಗಲಿವೆ. ಎರಡು ವರ್ಷ ಸೈದ್ಧಾಂತಿಕ ಹಾಗೂ ಕೊನೆಯ ವರ್ಷ ಸ್ಟೈಫಂಡ್ ಸಹಿತ ಇಂಟರ್ನ್ಶಿಪ್ ಇರಲಿದೆ. ಇದಕ್ಕಾಗಿ ಸ್ಕಿಲ್ ಸೆಕ್ಟರ್ ಕೌನ್ಸಿಲ್ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದರು.
‘ಸಮಸ್ಯೆಗಳಿಂದ ಬಳಲುತ್ತಿರುವ ವಿಶ್ವವಿದ್ಯಾಯಗಳನ್ನು ಹೊರತರಲು ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಏಕಕಾಲದಲ್ಲಿ ಪರೀಕ್ಷೆ, ವಿಶ್ವವಿದ್ಯಾಲಯಗಳ ಬೆಳವಣಿಗೆಯಲ್ಲಿ ಕುಲಪತಿಗಳ ಹೊಣೆಗಾರಿಕೆ ಮತ್ತು ಅವರಿಗೆ ಸಹಾಯಕರ ನಿಯೋಜನೆ, ಸಿಂಡಿಕೇಟ್ ಸದಸ್ಯರ ನೇಮಕಕ್ಕೆ ಶೈಕ್ಷಣಿಕ ಅರ್ಹತೆ, ಸ್ಥಳೀಯ ವಿಚಾರಣೆ ಸಮಿತಿಯಲ್ಲಿ ಸಿಂಡಿಕೇಟ್ ಸದಸ್ಯರ ಪಾಲ್ಗೊಳ್ಳುವಿಕೆಯಂತಹ ವಿಷಯಗಳು ಒಳಗೊಂಡಿರಲಿವೆ. ಮುಂದಿನ ಅಧಿವೇಶನದಲ್ಲಿ ಕಾಯ್ದೆಯನ್ನು ಮಂಡಿಸುವ ಚಿಂತನೆ ಇದೆ’ ಎಂದರು.
‘ವಿಶ್ವವಿದ್ಯಾಲಯಗಳ ಲೆಕ್ಕ ಪರಿಶೋಧನೆ (ಆಡಿಟ್) ಮಾಹಿತಿಯು ಸರ್ಕಾರದ ಗಮನಕ್ಕೆ ಬರುತ್ತಿಲ್ಲ. ಹೀಗಾಗಿ, ವಿವಿಗಳ ಆಡಳಿತದಲ್ಲಿ ಪಾರದರ್ಶಕತೆ ತರಲು ಪ್ರತಿ ವರ್ಷ ಆಡಿಟ್ ಮಾಡಿಸಿ, ವರದಿಯನ್ನು ತರಿಸಿಕೊಳ್ಳಲಾಗುವುದು’ ಎಂದು ಹೇಳಿದರು