ಮುಳಬಾಗಿಲು: ತಾಲ್ಲೂಕಿನ ಮುಷ್ಟೂರು ಗ್ರಾಮ ಪಂಚಾಯಿತಿ ಕಚೇರಿಯ ಕಟ್ಟಡ ಕಾಮಗಾರಿಯು ಅರ್ಧಕ್ಕೆ ಸ್ಥಗಿತಗೊಂಡಿದ್ದು, ಕಟ್ಟಡದ ಮೇಲೆ ನಾನಾ ಬಗೆಯ ಬಳ್ಳಿಗಳು ಹರಡಿಕೊಂಡಿವೆ. ಅಲ್ಲದೆ, ಕಟ್ಟಡ ಸುತ್ತಲಿನ ಆವರಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ.
ಮುಷ್ಟೂರು ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆ ₹21 ಲಕ್ಷ ವೆಚ್ಚದಲ್ಲಿ ಆಗಿನ ಶಾಸಕ ಎಚ್.ನಾಗೇಶ್, ಪಂಚಾಯಿತಿ ಕಾರ್ಯಾಲಯದ ಕಾಮಗಾರಿಗೆ ಚಾಲನೆ ನೀಡಿದ್ದರು.
ತಮ್ಮ ಅಧಿಕಾರದ ಅವಧಿಯಲ್ಲೇ ಕಟ್ಟಡ ಉದ್ಘಾಟನೆ ಮಾಡಬೇಕು ಎಂಬ ಕಾರಣಕ್ಕೆ ತರಾತುರಿಯಲ್ಲಿ ಕಟ್ಟಡದ ಒಳಗೆ ಕಾಮಗಾರಿ ಮುಗಿಸಿ, ಕಟ್ಟಡದ ಮುಂಭಾಗಕ್ಕೆ ಮಾತ್ರ ಸಿಮೆಂಟ್ ಪ್ಲಾಸ್ಟಿಂಗ್ ಮಾಡಿಸಲಾಯಿತು. ಆದರೆ, ಕಟ್ಟಡದ ಹಿಂಭಾಗದಲ್ಲಿ ಹಾಲೋಬ್ರಿಕ್ಸ್ಗೆ ಪ್ಲಾಸ್ಟಿಂಗ್ ಮಾಡದೆ ಹಾಗೆಯೇ ಬಿಡಲಾಗಿತ್ತು. ಆದರೆ, ಕಾಮಗಾರಿ ಆರಂಭವಾಗಿ ಎರಡು ವರ್ಷ ಕಳೆಯದಿದ್ದರೂ, ಉಳಿದ ಅರ್ಧಭಾಗದ ಕಾಮಗಾರಿ ನನೆಗುದಿಗೆ ಬಿದ್ದಿದೆ.

ನರೇಗಾ ಯೋಜನೆ ಹಾಗೂ ಪಂಚಾಯತ್ ರಾಜ್ ಇಲಾಖೆಯ ಯೋಜನೆಯಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಲಾಗಿದೆ. ಆದರೆ, ಅನುದಾನದ ಕೊರತೆಯಿಂದ ಕಾಮಗಾರಿ ಪೂರ್ಣಗೊಳಿಸಲಾಗುತ್ತಿಲ್ಲ. ಇದರಿಂದಾಗಿ ಕಟ್ಟಡದ ಸುತ್ತಲೂ ನಾನಾ ಬಗೆಯ ಗಿಡಗಂಟಿಗಳು ಬೆಳೆದು ನಿಂತಿವೆ. ಹಿಂಭಾಗದ ಸಿಮೆಂಟ್ ಪ್ಲಾಸ್ಟಿಂಗ್ ಮಾಡದ ಗೋಡೆಯ ಮೇಲೆ ಬಳ್ಳಿಗಳು ಪೊದೆಗಳಂತೆ ವ್ಯಾಪಿಸಿದ್ದು, ಹಾವುಗಳು ಬರಬಹುದು ಎಂಬ ಭಯದಲ್ಲೇ ಬದುಕುವಂತಾಗಿದೆ ಎಂದು ಸುತ್ತಮುತ್ತಲಿನ ಜನರು ಆತಂಕ ವ್ಯಕ್ತಪಡಿಸಿದರು.
ಈಗಾಗಲೇ ಪೂರ್ಣಗೊಂಡ ಕಾಮಗಾರಿಯಲ್ಲಿ ಕಚೇರಿ ಕೆಲಸಕ್ಕಾಗಿ ದೊಡ್ಡ ಕೋಣೆ, ಅಧ್ಯಕ್ಷ, ಉಪಾಧ್ಯಕ್ಷರ ಕೋಣೆ, ಪಿಡಿಒ ಕೋಣೆ ಹಾಗೂ ಶೌಚಾಲಯ ಕೋಣೆ ನಿರ್ಮಿಸಲಾಗಿದೆ. ಆದರೆ, ಎಲ್ಲ ಸದಸ್ಯರು ಒಂದೇ ಸಲ ಕೂರಲು ಅಥವಾ ಸಭೆಗಳನ್ನು ನಡೆಸಲು ಅಗತ್ಯವಿರುವ ಸಭಾಂಗಣದ ಕೊಠಡಿ ನಿರ್ಮಾಣವಾಗಿಲ್ಲ. ಇನ್ನಾದರೂ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.
ಕಟ್ಟಡದ ಮೇಲೆ ಜಲ್ಲಿ, ಮರಳು ಹಾಗೂ ಹಾಲೋಬ್ರಿಕ್ಸ್, ಇಟ್ಟಿಗೆಗಳು ಅಡ್ಡಾದಿಡ್ಡಿಯಾಗಿ ಬಿದ್ದಿವೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆ, ನೈರ್ಮಲ್ಯ, ಕುಡಿಯುವ ನೀರು ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕಿರುವ ಪಂಚಾಯಿತಿ ಕಟ್ಟಡದಲ್ಲೇ ಸಮಸ್ಯೆಗಳು ಇದ್ದರೆ, ಹಳ್ಳಿಗಳ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಅಧಿಕಾರಿಗಳು ಹೇಗೆ ಶ್ರಮಿಸುತ್ತಾರೆ ಎಂಬುದು ಜನಸಾಮಾನ್ಯರ ಪ್ರಶ್ನೆಯಾಗಿದೆ.
Laxmi News 24×7