ಮುಂಡರಗಿ: ‘ದಾನ ಮಾಡುವುದು ಸತ್ಕಾರ್ಯವಾಗಿದ್ದು, ಸಮಾಜದಲ್ಲಿ ಸಾವಿರಾರು ಕುಟುಂಬಗಳು ದಾನಿಗಳು ನೀಡುವ ದೇಣಿಗೆಯನ್ನು ಅವಲಂಬಿಸಿವೆ. ನಾವೆಲ್ಲ ಪ್ರತಿವರ್ಷ ನಮ್ಮ ದುಡಿಮೆಯ ಶೇ 35ರಷ್ಟು ಭಾಗವನ್ನು ದಾನ, ಧರ್ಮಕ್ಕೆ ಮೀಸಲಿಡಬೇಕು’ ಎಂದು ನಿವೃತ್ತ ಡಿಡಿಪಿಐ ಎಂ.ಎ.ರಡ್ಡೇರ ತಿಳಿಸಿದರು.
ರಡ್ಡಿ ಬಳಗವು ಪಟ್ಟಣದ ಬೃಂದಾವನ ವೃತ್ತದಲ್ಲಿರುವ ವೆಂಕಟೇಶ್ವರ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
‘ನಮ್ಮ ನಾಡಿನಲ್ಲಿ ಬಾಳಿಹೋದ ಶರಣರು, ಸಂತರು, ಮಹಾತ್ಮರು ನಾವು ಹೇಗೆ ಬದುಕಬೇಕು ಎನ್ನುವುದನ್ನು ತಿಳಿಸಿದ್ದಾರೆ. ಕುಟುಂಬವನ್ನು ನಿರ್ವಹಿಸುವ, ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣುವ, ದಾನ ಮಾಡುವ ಬಗೆಯನ್ನು ಶರಣೆ ಹೇಮರಡ್ಡಿ ಮಲ್ಲಮ್ಮ ತಿಳಿಸಿಕೊಟ್ಟಿದ್ದಾರೆ’ ಎಂದರು.
ಭೂಮಿಕಾ ರಾಜೂರ ಮಾತನಾಡಿ, ‘ವಿಶೇಷ ಸಾಧನೆ ಮಾಡಿದ ಮಹನೀಯರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾಜ ಗುರುತಿಸಿ ಸನ್ಮಾನ ಮಾಡುತ್ತಿರುವುದು ಸಂತಸದ ಸಂಗತಿ. ಇದು ಇತರರಿಗೂ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ’ ಎಂದು ತಿಳಿಸಿದರು.