ಬೈಲಹೊಂಗಲ: ‘ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಂಬಂಧಪಟ್ಟ ಪಿಡಿಒ, ಗ್ರಾಮಲೆಕ್ಕಾಧಿಕಾರಿ ಮತ್ತು ನೋಡೆಲ್ ಅಧಿಕಾರಿಗಳು ತಕ್ಷಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು’ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆಯಿಂದ ಹಾನಿಗೊಳಗಾದ ಸ್ಥಳಗಳ ಪರಿಶೀಲಿಸಿ ಬಿದ್ದ ಮನೆ, ಶಾಲೆ, ಅಂಗನವಾಡಿ, ಬೆಳೆ ಹಾನಿ, ಕುರಿತು ಇದುವರೆಗೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಎಷ್ಟು ವರದಿ ಕಳುಹಿಸಲಾಗಿದೆ. ಮಳೆ ಹಾನಿ ಕುರಿತು ನೋಡೆಲ್ ಅಧಿಕಾರಿಗಳು ಯಾರು, ಯಾವ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದೀರಿ ಎಂಬುವುದರ ಬಗ್ಗೆ ಮಾಹಿತಿ ಕೇಳಿದರು. ಈ ಕುರಿತು ಸರಿಯಾದ ಮಾಹಿತಿ ಒದಗಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
‘ಹದಿನೈದು ದಿನಗಳಲ್ಲಿ ವರದಿ ನೀಡಬೇಕು. ಶಾಲೆಯಲ್ಲಿ ಹಾನಿ ಆಗಿದ್ದರೆ ಬೇರೆ ಕಡೆ ಸ್ಥಳಾಂತರ ಮಾಡಬೇಕು. ಈ ಕುರಿತು ತಕ್ಷಣ ಮುಖ್ಯಶಿಕ್ಷಕರಿಗೆ ತಿಳಿಸಿ ಶಾಲೆಯ ತರಗತಿಗಳನ್ನು ಬೇರೆ ಕಡೆಗೆ ನಡೆಸಲು ತಿಳಿಸಬೇಕು. ಶಾಲೆ, ಅಂಗನವಾಡಿಗಳ ದುರಸ್ತಿಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು’ ಎಂದು ಸೂಚಿಸಿದರು.