ಹುಬ್ಬಳ್ಳಿ: ವಾರದ ಹಿಂದಷ್ಟೇ ಮಾದಕ ವಸ್ತುಗಳ ಬಳಕೆ ಮಾಡುವವರ ವಿರುದ್ಧ ಕಾರ್ಯಾಚರಣೆ ನಡೆಸಿ 255 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಹು-ಧಾ ಮಹಾನಗರ ಪೊಲೀಸರು, ಭಾನುವಾರ ಮತ್ತೊಮ್ಮೆ ಕಾರ್ಯಾಚರಣೆ ನಡೆಸಿ 251 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾದಕ ವಸ್ತು ಬಳಸುವ ಸಂಶಯಾಸ್ಪದ 467 ಮಂದಿಯನ್ನು ವಶಕ್ಕೆ ಪಡೆದು ಧಾರವಾಡ ಜಿಲ್ಲಾಸ್ಪತ್ರೆ, ಡಿಮಾನ್ಸ್ ಮತ್ತು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದು, ಪರೀಕ್ಷೆ ಮಾಡಿಸಿದರು. 251 ಮಂದಿ ಮಾದಕ ವಸ್ತುಗಳನ್ನು ಬಳಸಿರುವುದು ವರದಿಯಾಗಿದ್ದು, ಅವರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಬಳಕೆ ನಿಷಿದ್ಧ ಕಾಯ್ದೆಯಡಿ 44 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಬಂಧಿತರಾದ ಮಾದಕ ವ್ಯಸನಿಗಳನ್ನೆಲ್ಲ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸೇರಿಸಿ, ಪಾಲಕರ ಸಮ್ಮುಖದಲ್ಲಿ ವೈದ್ಯರಿಂದ ಆಪ್ತ ಸಮಾಲೋಚನೆ ನಡೆಸಿ, ಅರಿವು ಮೂಡಿಸಲಾಯಿತು. ಬಹುತೇಕ ಪಾಲಕರಿಗೆ ತಮ್ಮ ಮಕ್ಕಳು ಮಾದಕ ವ್ಯಸನಿಗಳಾಗಿರುವ ಬಗ್ಗೆ ಮಾಹಿತಿಯೇ ಇರಲಿಲ್ಲ. ಅದನ್ನರಿತ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಪಾಲಕರ ಸಮ್ಮುಖದಲ್ಲಿಯೇ ಮಕ್ಕಳನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದರು.